ಲೋಕಾಪೂರದಿಂದ ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ರೈಲು ಸೇವೆ ವಿಸ್ತರಣೆಗೆ ಒತ್ತಾಯಿಸಿ ಬಾಗಲಕೋಟೆ ರೈಲ್ವೆ ನಿಲ್ದಾಣದ ಮುಂದೆ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿಯವರ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.
ಬಾಗಲಕೋಟೆಯಿಂದ ಲೋಕಾಪೂರಕ್ಕೆ ಪ್ಯಾಸೆಂಜರ್ ರೈಲು ಬಿಡಬೇಕು, ಲೋಕಾಪೂರದಿಂದ ಧಾರವಾಡಕ್ಕೆ ನೂತನ ರೈಲು ಮಾರ್ಗ ನಿರ್ಮಿಸಬೇಕು, ಬೆಂಗಳೂರು ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲನ್ನು ಬಾಗಲಕೋಟೆ ವಿಜಯಪುರ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕು, ಸೋಲಾಪುರ ಹುಬ್ಬಳ್ಳಿ ಇಂಟರ್ ಸಿಟಿ ರೈಲನ್ನು ವಾಸ್ಕೋಡಿಗಾಮಾವರೆಗೆ ವಿಸ್ತರಿಸಬೇಕು, ಹಜರತ್ ನಿಜಾಮುದ್ದೀನ್, ಮೈಸೂರು-ಶಿರಡಿ ಹಾಗೂ ಯಶವಂತಪುರ-ಬಿಕಾನೇರ ರೈಲುಗಳನ್ನು ಪ್ರತಿದಿನ ಸಂಚರಿಸುವಂತೆ ಮಾಡಬೇಕು ಹಾಗೂ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ರೈಲುಗಳ ನಿರ್ವಹಣೆ ಕಾರ್ಯವನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಕುತ್ಬುದ್ದಿನ್ ಕಾಜಿ ಮತ್ತು ಶ್ರೀನಿವಾಸ ಬಳ್ಳಾರಿಯವರು ಬಾಗಲಕೋಟೆ ರೈಲು ನಿಲ್ದಾಣದ ಮುಂದೆ ಉರುಳು ಸೇವೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುತ್ಬುದ್ದಿನ್ ಕಾಜಿ, “ಬಾಗಲಕೋಟೆಯಿಂದ ಲೋಕಾಪೂರ ಮಾರ್ಗದಲ್ಲಿ ರೈಲುಗಳ ಓಡಾಟವಿಲ್ಲದೇ ನಿಲ್ದಾಣಗಳು ಹಾಳಾಗುತ್ತಿದ್ದು, ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಆದ್ದರಿಂದ ಬಾಗಲಕೋಟೆ ಲೋಕಾಪೂರ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಬಿಡಬೇಕು. ಬಾಗಲಕೋಟೆ ಕುಡಚಿ ಕಾಮಗಾರಿಗೆ ವೇಗ ನೀಡಬೇಕು. ಜತೆಗೆ ಲೋಕಾಪೂರದಿಂದ ಧಾರವಾಡ ನೂತನ ರೈಲು ಮಾರ್ಗ ನಿರ್ಮಿಸಲೇಬೇಕು. ಇಲ್ಲವಾದರೆ, ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಾಗಲಕೋಟೆ | ಕಬ್ಬು ಬೆಳೆಗಾರ ಜೊತೆಗಿನ ಸಂಧಾನ ಯಶಸ್ವಿ, ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿ
ಶ್ರೀನಿವಾಸ ಬಳ್ಳಾರಿ ಮಾತನಾಡಿ, “ಬಾಗಲಕೋಟೆಯಿಂದ ವಿವಿಧ ನಗರಗಳಿಗೆ ಹೆಚ್ಚಿನ ರೈಲುಗಳನ್ನು ಬಿಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದೇವೆ. ಬಾಗಲಕೋಟೆ ರೈಲು ನಿಲ್ದಾಣದಲ್ಲಿ ರೈಲುಗಳ ಓಡಾಟ ಹೆಚ್ಚಾದರೆ ಇಲ್ಲಿನ ವಿದ್ಯಾರ್ಥಿಗಳಿಗೆ, ವ್ಯಾಪಾರಿಗಳಿಗೆ, ನೌಕರಸ್ಥರಿಗೆ ಬಹಳ ಅನುಕೂಲವಾಗತ್ತೆ ಮತ್ತು ಬಾಗಲಕೋಟೆ ನಗರವು ಇನ್ನಷ್ಟು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ. ಬಾಗಲಕೋಟೆ-ಕುಡಚಿ ಮಾರ್ಗಕ್ಕೆ ಈಗಾಗಲೇ ಭೂಮಿ ನೀಡಿದಂತಹ ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಮತ್ತು ಲೋಕಾಪೂರದಿಂದ ಧಾರವಾಡ ನೂತನ ರೈಲು ಮಾರ್ಗ ನಿರ್ಮಿಸಬೇಕು” ಎಂದು ಒತ್ತಾಯಿಸಿ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ಬಾಗಲಕೋಟೆ ವಾಣಿಜ್ಯೋದ್ಯಮಿ ಸಂಘದ ಅಧ್ಯಕ್ಷ ರವಿ ಕುಮಟಗಿ, ರಾಮದುರ್ಗ ರೈಲು ಹೋರಾಟ ಸಮಿತಿ ಮುಖಂಡ ಎಂ ಕೆ ಯಾದವಾಡ, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಬಾಗಲಕೋಟೆ ಲೋಕಾಪೂರ, ಸವದತ್ತಿ, ರಾಮದುರ್ಗದ ರೈಲು ಹೋರಾಟ ಕ್ರಿಯಾ ಸಮಿತಿಯ ಮುಖಂಡರು ಪಾಲ್ಗೊಂಡಿದ್ದರು.





