ಬರೋಬ್ಬರಿ ಒಂದು ದಶಕದ ಬಳಿಕ ಚಾಲುಕ್ಯ ಉತ್ಸವ ಆಚರಣೆಗೆ ಕಾಲ ಕೂಡಿಬಂದಿದ್ದು, ಈ ಉತ್ಸವಕ್ಕೆ ಇಂದು ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ.
2015ರ ಬಳಿಕ ವಿವಿಧ ಕಾರಣಗಳಿಗಾಗಿ ಚಾಲುಕ್ಯ ಉತ್ಸವ ನಡೆದಿರಲಿಲ್ಲ. ಈ ಭಾಗದ ಕಲಾವಿದರು, ಕನ್ನಡಪರ ಸಂಘಟನೆಗಳ ನಿರಂತರ ಒತ್ತಾಯದ ಬಳಿಕ ಜನವರಿ 19ರಿಂದ ಮೂರು ದಿನಗಳ ಕಾಲ ಉತ್ಸವ ಆಯೋಜಿಸಲಾಗಿದೆ. ಜನವರಿ 19ರಂದು ಬಾದಾಮಿ, 29ರಂದು ಪಟ್ಟದಕಲ್ಲು ಹಾಗೂ 21ರಂದು ಐಹೊಳೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಬಾದಾಮಿ ಪಟ್ಟಣದ ಬೃಹತ್ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಸಂಜೆ 6:30ಕ್ಕೆ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಆಶಯದಲ್ಲಿ ಹಮ್ಮಿಕೊಂಡಿರುವ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ, ಸಚಿವ ಆರ್ ಬಿ ತಿಮ್ಮಾಪುರ್ ಸೇರಿದಂತೆ ಹಲವು ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಹಿನ್ನೆಲೆ ಗಾಯಕ ಸಂಜಿತ್ ಹೆಗಡೆ ಮತ್ತು ತಂಡದವರಿಂದ ರಾತ್ರಿ ಲಹರಿ ಕಾರ್ಯಕ್ರಮ ನಡೆಯಲಿವೆ.
ಇದೇ ವೇಳೆ ಹಲವು ವರ್ಷಗಳ ಬೇಡಿಕೆಯಾಗಿದ್ದ ಬಾದಾಮಿ ಚಾಲುಕ್ಯ ಅರಸರ ದೊರೆ ಇಮ್ಮಡಿ ಪುಲಕೇಶಿ ಪುತ್ಥಳಿ ನಿರ್ಮಾಣ ಬೇಡಿಕೆಗೆ ಸ್ಪಂದನೆ ಸಿಕ್ಕಿದ್ದು, ಚಾಲುಕ್ಯ ಉತ್ಸವ ಉದ್ಘಾಟನೆಗೆ ಮುನ್ನ ಬಾದಾಮಿಯ ರಾಮದುರ್ಗ ಕ್ರಾಸ್ ಬಳಿ ಇಮ್ಮಡಿ ಪುಲಕೇಶಿ ವೃತ್ತದಲ್ಲಿ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಹಾತ್ಮ ಗಾಂಧೀಜಿ ಜೀವನಾಧಾರಿತ ಪುಸ್ತಕಗಳ ಪಟ್ಟಿ ಮಾಡಿ, ಖರೀದಿಸಿ: ಡಿಸಿ ಆನಂದ ಕೆ ಸೂಚನೆ
ಬಳಿಕ ಬಾದಾಮಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಯುವ ಮುಖಂಡ ವಳಬಸ್ಸು ಶೆಟ್ಟರ್ ಒಡೆತನದ ನವೀಕೃತ ಹೋಟೆಲ್ ಬಾದಾಮಿ ಕೋರ್ಟ್ ಉದ್ಘಾಟನೆ, ಶ್ರೀಜಿತ್ ರೆಸಾರ್ಟ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಂಜೆ 5ಕ್ಕೆ ಅಂಜುಮನ್ ಇಸ್ಲಾಂ ಕಮಿಟಿಯಲ್ಲಿ ವರ್ಕೌಟ್ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅನುದಾನದಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶೀಲಾನ್ಯಾಸ, ಸಂಜೆ 5:15ಕ್ಕೆ ಎಸ್ ಎಫ್ ಹೊಸಗೌಡ್ರು ಮತ್ತು ಸನ್ಸ್ ಪೆಟ್ರೋಲಿಯಂ ಉದ್ಘಾಟನೆ ನಡೆಯಲಿದ್ದು, 5.30ಕ್ಕೆ ಬನಶಂಕರಿದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡಿಯಲಿದ್ದಾರೆ ಎನ್ನಲಾಗಿದೆ.





