ಜನವರಿ 1ರ ಭೀಮಾ ಕೋರೆಗಾಂವ್ ವಿಜಯೋತ್ಸವ ನಮ್ಮೆಲ್ಲರ ಬಿಡುಗಡೆಯ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದೊಂದಿಗೆ ಅವಿನಾಭಾವವಾಗಿ ಬೆಸೆದ ದಿನ ಎಂದು ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ರಾಜ್ಯ ಉಸ್ತುವಾರಿ ಕೆ ಸಿ ಅಕ್ಷತಾ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಮಹಾರಾಷ್ಟ್ರ ರಾಜ್ಯದ ಪುಣೆ ಸಮೀಪದ ಭೀಮಾ ನದಿ ತೀರದಲ್ಲಿ 1818ರಲ್ಲಿ ನಡೆದ ಯುದ್ಧದಲ್ಲಿ ಸುಮಾರು 28,000ದಷ್ಟಿದ್ದ ಬ್ರಾಹ್ಮಣ ಮರಾಠ ಪೇಶ್ವೆ ಸೈನ್ಯವನ್ನು ಕೇವಲ 500 ಜನ ಮಹರ್ ಸೖನಿಕರು ಸದೆಬಡೆದು ಸೋಲಿಸಿ ಅಸ್ಪೃಶ್ಯತೆ, ಅಸಮಾನತೆಯ ಮುಯ್ಯಿ ತೀರಿಸಿಕೊಂಡ ಇತಿಹಾಸವೇ ಭೀಮಾ ಕೋರೆಗಾಂವ್ ವಿಜಯೋತ್ಸವ” ಎಂದರು.
“ಈ ಐತಿಹಾಸಿಕ ವಿಜಯದ ನೆನಪಿಗಾಗಿಯೇ ಯುದ್ಧದಲ್ಲಿ ಮಡಿದ ಮಹರ್ ಸೈನಿಕರ ನೆನಪಿಗಾಗಿ ಭೀಮಾ ಕೋರೆಗಾಂವ್ ಸ್ಮಾರಕ ಕಂಬವನ್ನು ಬ್ರಿಟಿಷರು ಸ್ಥಾಪಿಸಿದರು. ದಲಿತರ ಸ್ವಾಭಿಮಾನದ ಪ್ರತೀಕವಾದ, ದಲಿತರ ಅಸ್ಮಿತೆಯ ಸಂಕೇತವಾದ ಈ ವಿಜಯೋತ್ಸವವನ್ನು ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜನೆ ಮಾಡಲಾಗಿತ್ತು” ಎಂದು ತಿಳಿಸಿದರು.
“ಯಾವುದೇ ಪ್ರಮುಖ ಕಾರ್ಯಕ್ರಮಗಳಿದ್ದರೂ ಕೂಡ ಬಾಬಾ ಸಾಹೇಬ್ ಅವರು ತಮ್ಮ ಜೀವನದ ಕೊನೆಯ ದಿನದವರೆಗೆ ಜನವರಿ 1ರಂದು ಭೀಮಾ ಕೋರೆಗಾಂವ್ಗೆ ತೆರಳಿ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸುತ್ತಿದ್ದರು. ಅಂಬೇಡ್ಕರ್ ವಿಚಾರಧಾರೆಯಲ್ಲಿ ನಂಬಿಕೆಯಿಟ್ಟಿರುವ ನಾವು ಆ ಪರಂಪರೆಯನ್ನು ಮುಂದುವರಿಸಿಕೊಂಡು ಅವರ ಚಿಂತನೆ ಹಾಗೂ ಹೋರಾಟವನ್ನು ಬೆಂಬಲಿಸಿ ಮುನ್ನಡೆಸುತ್ತಿದ್ದೇವೆ” ಎಂದು ಹೇಳಿದರು.
“ಭೀಮಾ ಕೋರೇಗಾಂವ್ ವಿಜಯವು ಶೋಷಿತ ಸಮುದಾಯಗಳು ಜಾತಿವಾದಿ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ಐತಿಹಾಸಿಕ ದಿನವಾಗಿದ್ದು, ಅದು ನಮ್ಮ ಸ್ವಾಭಿಮಾನದ ಪ್ರತೀಕವಾಗಿದೆ. ಜನವರಿ 1 ಬಂದಾಗಲೆಲ್ಲ ನಮ್ಮ ರೋಮರೋಮಗಳಲ್ಲಿ ಶೌರ್ಯದ ಕಿಚ್ಚು ಉರಿಯುತ್ತದೆ. ನಮ್ಮ ಹಿರಿಯರು ನಿರ್ಮಿಸಿದ ಶೌರ್ಯದ ಇತಿಹಾಸವನ್ನು ನೆನಪಿಸಿಕೊಂಡು ನಾವು ರೋಮಾಂಚನಗೊಳ್ಳುತ್ತೇವೆ. ಈ ಹಿನ್ನಲೆಯಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ತುದಿಗಾಲಲ್ಲಿ ನಿಂತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ” ಎಂದು ಅವರು ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭೀಮ್ ಆರ್ಮಿ ಏಕತಾ ಮಿಷನ್ ರಾಜ್ಯ ಅಧ್ಯಕ್ಷ ಮತಿನ ಕುಮಾರ್ ಅಂಬೇಡ್ಕರ್ ಮಾತನಾಡಿ, “ನವ ಪೇಶ್ವೆವಾದಿಗಳು ಇನ್ನೂ ಕೂಡ ದಲಿತರ ಮೇಲಿನ ದಮನವನ್ನು ಕಡಿಮೆ ಮಾಡಿಲ್ಲ. ಹಾಗಾಗಿ ಈ ಮಹರ್ ಪ್ರತಿಭಟನೆ ಇಂದಿಗೂ ಮುಂದುವರೆಯಬೇಕಾದ ಅಗತ್ಯವಿದೆ. ನವ ಪೇಶ್ವೆವಾದಿ ಆಡಳಿತವನ್ನು ಕೊನೆಗಾಣಿಸುವವರೆಗೂ ಭೀಮಾ ಕೋರೆಗಾಂವ್ ಹೋರಾಟ ಮುಂದುವರೆಯಬೇಕಾಗಿದೆ” ಎಂದು ತಿಳಿಸಿದರು.
“ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಇದೊಂದು ವಿಜಯೋತ್ಸವ ಮಾತ್ರವಲ್ಲ, ದಲಿತರ ಪ್ರತಿರೋಧದ ಪ್ರತೀಕವಾಗಿ ಬ್ರಾಹ್ಮಣಶಾಹಿ ನವ ಪೇಶ್ವೆವಾದಿಗಳ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡಬೇಕಾಗಿದೆ. ಆ ಮೂಲಕ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಎಸ್ ಐಆರ್ ಓಟಿನ ಹಕ್ಕು ಕಸಿಯುತ್ತಿದೆ : ಡಾ ಎಚ್ ವಿ ವಾಸು
“ಇತಿಹಾಸದಲ್ಲಿ ಮುಚ್ಚಿಟ್ಟಿರುವುದನ್ನು ಅಂಬೇಡ್ಕರ್ ಬ್ರಿಟನ್ನಲ್ಲಿ ಅಧ್ಯಯನ ಮಾಡುವಾಗ ಗ್ರಂಥಾಲಯದಲ್ಲಿ ಈ ಯುದ್ಧ ಕುರಿತು ಮಾಹಿತಿ ಸಿಕ್ಕಿದೆ. ಈ ಯುದ್ಧದ ಕುರಿತು ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅಂಬೇಡ್ಕರ್ಗೆ ಸಲ್ಲುತ್ತದೆ” ಎಂದರು.
ಈ ಸಂಭ್ರಮಾಚರಣೆಯಲ್ಲಿ ರಾಜ್ಯ ಉಪಧ್ಯಕ್ಷ ಹುಸನಪ್ಪ ಚಲವಾದಿ, ಪ್ರವೀಣಗೌಡ ಪಾಟೀಲ್, ಅನಿಲ್ ಗಚಿನಮನಿ, ಶ್ರೀಕಾಂತ್ ಗೋಡೆಪ್ಪನವರ, ಬಸವರಾಜ್ ರಾಜವರ್ಧನ್ ಹಾಗೂ ದಲಿತ ಮುಖಂಡರು ಇದ್ದರು.





