ಜನತೆಯ ರಾಜನೆಂದೇ ಖ್ಯಾತಿವೆತ್ತ ಸೌಹಾರ್ದತೆಯ ಸಂಕೇತವಾಗಿದ್ದ ಶಿವಾಜಿ ಮಹಾರಾಜರ ಜಯಂತಿ ಆಚರಣೆ ನಿಮಿತ್ಯ ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಕೋಮುವಾದಿ ಗೂಂಡಾಗಳು ಅನಾವಶ್ಯಕ ಉದ್ರೇಕಕಾರಿ ನೃತ್ಯ, ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದ್ದಲ್ಲದೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಿಂದನೀಯವಾಗಿ ವರ್ತಿಸಿದ್ದು ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹಾಗಾಗಿ ಜನತೆಯು ಕೋಮುವಾದಿಗಳ ಹುನ್ನಾರಕ್ಕೆ ಬಲಿಯಾಗದಂತೆ ಭ್ರಾತೃತ್ವತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದು ಸತ್ಯ ಶೋಧನಾ ಸಮಿತಿಯು ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಗಲಕೋಟೆಯ ಪಂಕಾ ಮಸೀದಿ ಎದುರು ಫೆಬ್ರವರಿ 19ರಂದು ಸಂಭವಿಸಿದ್ದ ಕಲ್ಲು ತೂರಾಟ ಪ್ರಕರಣ ಸಂಬಂಧ ಮಾಹಿತಿ ಕಲೆಹಾಕಲು ಬಾಗಲಕೋಟೆಗೆ ಭೇಟಿ ನೀಡಿದ ನಿಯೋಗವು ಘಟನಾ ಸ್ಥಳ, ತಳ್ಳುಗಾಡಿ ಸುಟ್ಟಿರುವುದನ್ನು ಪರಿಶೀಲಿಸಿದಾಗ ಸತ್ಯಾಂಶ ಹೊರಬಿದ್ದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಅನೇಕ ನಾಗರಿಕರನ್ನೂ ಒಳಗೊಂಡಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಆಗ್ರಹ ಪತ್ರ ಸಲ್ಲಿಸಿದೆ.
“ಕಲ್ಲುತೂರಾಟ ನಡೆದ ಸ್ಥಳದಲ್ಲಿದ್ದ ಪೊಲೀಸರು ಅವಘಡಗಳನ್ನು ತಪ್ಪಿಸುವ ಪ್ರಯತ್ನ ಮಾಡಿದ್ದೇವೆಂದು ಸಮಜಾಯಿಷಿ ನೀಡಿದರಾದರೂ ಸ್ಥಳೀಯರನ್ನು ಸಂದರ್ಶಿಸಿ ವಿಷಯ ಸಂಗ್ರಹಿಸಿದಾಗ, ಇದೊಂದು ಪೂರ್ವ ನಿಯೋಜಿತ ರಾಜಕೀಯ ಸಂಚು ನಡೆದಿದೆಯೇ ಹೊರತು ಆಕಸ್ಮಿಕವಾಗಿ ಸಂಬಂಧಿಸಿದ್ದಲ್ಲ ಎಂಬುದು ಸ್ಥೂಲವಾಗಿ ಗ್ರಹಿಕೆಗೆ ಬಂದಿದೆ” ಎಂದು ಸಮಿತಿ ತಿಳಿಸಿದೆ.
“ಬಾಗಲಕೋಟೆಯಲ್ಲಿ ನಡೆಯಲಿರುವ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಸಂಘ ಪರಿವಾರದ ಕಟ್ಟಾಳುಗಳು ಉದ್ದೇಶ ಪೂರ್ವಕವಾಗಿ ಈ ಗಲಬೆ ಎಬ್ಬಿಸಿರುವುದು ಸ್ಪಷ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ತನ್ನ ಹಿತಾಸಕ್ತಿಗಾಗಿ ಕೋಮು ಪ್ರಚೋದಿತ ಸಂಘರ್ಷಕ್ಕೆ ಚಾಲನೆಗೊಳಿಸುತಿದೆ. ರಾಜಕೀಯ ಪಕ್ಷಗಳ ಈ ಹೋರಾಟದಲ್ಲಿ ಸಾಮಾನ್ಯ ಜನತೆಯ ಬದುಕು ಭಾವನೆಗಳು ಮೂರಾಬಟ್ಟೆಯಾಗುತ್ತಿವೆ. ಅನೇಕ ವರ್ಷಗಳಿಂದ ಕೋಮುಸೌಹಾರ್ದತೆಯ ಪರಂಪರೆ ಹೊಂದಿರುವ ನಾಡಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಮತೀಯ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ” ಎಂದು ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
“ಕೋಮು ಸೂಕ್ಷ್ಮತೆ ಹೊಂದಿದ ಪ್ರದೇಶದಲ್ಲಿ ತಡರಾತ್ರಿವರೆಗೂ ಮೆರವಣಿಗೆ ನಡೆಸಲು ಅನುಮತಿಸಿದ್ದು, ಮೆರವಣಿಗೆಯು ಮಸೀದಿಯ ಎದುರು ಅನಾವಶ್ಯಕವಾಗಿ ಹೆಚ್ಚು ಹೊತ್ತು ನಿಂತುಕೊಂಡು ಪ್ರಚೋದನಕಾರಿ, ಅಶ್ಲೀಲ ಘೋಷಣೆಗಳು, ಉದ್ರೇಕಕಾರಿ ಹಾಡು ಇತ್ಯಾದಿಗಳಿಗೆ ಅವಕಾಶ ಕಲ್ಪಿಸಿದ್ದಕ್ಕೆ ಜಿಲ್ಲಾ ಆಡಳಿತ ಹೊಣೆಯಾಗಿದೆ” ಎಂದು ಆರೋಪಿಸಿದೆ.

“ಮಸೀದಿಯೊಳಗಿಂದ ಕಲ್ಲು ಬಂದಿದೆ ಎಂದು ಹೇಳಲಾಗುತ್ತಿದ್ದು ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಂತೆಯೇ ಕೋಮುವಾದಿಗಳು ಮರುದಿನವೂ ಅಂಗಡಿಗಳನ್ನು ಮುಚ್ಚಿಸಿದ್ದು ಕಲ್ಲು ತೂರಾಟ ಮಾಡಿದ್ದೂ ಕೂಡ ನಡೆದಿದೆ. ತಳ್ಳುಗಾಡಿಗಳನ್ನು ಸುಡಲಾಗಿದೆ. ಅಲ್ಲದೆ ಕೋಮುವಾದಿ ಸಂಘಟನೆಗಳು ನಡೆಸಲಾದ ಧರಣಿಯಲ್ಲಿ ಭಾಷಣ ಮಾಡಿದವರು ತೀವ್ರ ದ್ವೇಷಮಯಿ ಮಾತುಗಳನ್ನು ಆಡಿದ್ದಾರೆ. ಜೇವರ್ಗಿಯ ಸಿದ್ದಲಿಂಗ ಸ್ವಾಮಿಯು ಟ್ರ್ಯಾಕ್ಟರ್ನಲ್ಲಿ ಕಲ್ಲು ತುಂಬಿಕೊಂಡು ಬರಯುವುದಾಗಿ ಕರೆ ಕೊಟ್ಟಿದ್ದಾರೆ. ಇನ್ನೂ ಅನೇಕ ವಿಷಯಗಳು ಜನತೆಯನ್ನು ವಿಭಜನೆಗೊಳಿಸುವ ಷಡ್ಯಂತ್ರಗಳು ಈ ಪ್ರಕರಣದಲ್ಲಿ ಹುದುಗಿಕೊಂಡಿವೆ” ಎಂದಿದೆ.
“ಉಪಚುನಾವಣೆಯಲ್ಲಿ ಮತ ವಿಭಜನೆಯಾಗಲು ಶಿವಾಜಿ ಜಯಂತಿಯ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಮೌನವು ಅನಾಹುತಕಾರಿಯಾದದ್ದು. ಕೋಮು ಆಟಕ್ಕೆ ಪೂರಕವಾದದ್ದಾಗಿದೆ. ಪೂರ್ವನಿಯೋಜಿತವಾದ ಈ ಕೋಮು ಸಂಘರ್ಷವನ್ನು ತೀವ್ರ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಸರ್ಕಾರವು ಇದನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕು” ಎಂದು ನಿಯೋಗವು ಆಗ್ರಹಿಸಿದೆ.
ಇದನ್ನೂ ಓದಿದ್ದೀರಾ? ವಿಜಯಪುರ | ʼಗ್ಯಾರಂಟಿʼಗಳಿಗಾಗಿ ನೀರಾವರಿ ಯೋಜನೆಗಳನ್ನೇ ಸರ್ಕಾರ ಸ್ಥಗಿತಗೊಳಿಸಿದೆ: ನಿಖಿಲ್ ಕುಮಾರಸ್ವಾಮಿ
ನಿಯೋಗದಲ್ಲಿ ಸೌಹಾರ್ದ ಕರ್ನಾಟಕ ಸಮಿತಿಯ ಕೆ ನೀಲಾ, ಡಾ ಮೀನಾಕ್ಷಿ ಬಾಳಿ, ಪ್ರೊ. ಕಾಶಿನಾಥ ಅಂಬಲಗೆ, ಮೆಹರಾಜ್ ಪಟೇಲ ಹಾಗೂ ಮೇ ಸಾಹಿತ್ಯ ಮೇಳದ ಬಳಗ, ಬಸವರಾಜ ಸೂಳಿಭಾವಿ, ಮುತ್ತು ಬಿಳಿಯೆಲೆ, ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಜೆ ಎಸ್ ಪಾಟೀಲ ಹಾಗೂ ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ, ರೈತ ಸಂಘದಿಂದ ಭೀಮರಾಯ ಪೂಜಾರಿ, ಜನಶಕ್ತಿ ಪತ್ರಿಕೆಯ ರಾಮಕೃಷ್ಣ, ಬೆಂಗಳೂರು ವಕೀಲಾರ್ ಮಲ್ಲಿಕಾರ್ಜುನ ಹಡಪದ ಸೇರಿದಂತೆ ಇತರರು ಇದ್ದರು.
ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಲು ಘಟನಾ ಸ್ಥಳಕ್ಕೆ ತೆರಳಿದಾಗ ಅವಕಾಶ ಮಾಡಿಕೊಡದೆ ಪೊಲೀಸರನ್ನೇ ಅಡ್ಡಗಟ್ಟಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಎಸ್ಪಿಯವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಇನ್ವೆಸ್ಟಿಗೇಷನ್ ಮಾಡಲು ಹೋದಾಗ ತುಂಬಾ ಜನ ಸೇರಿದ್ದರು. 10-15 ಮಂದಿ ಮಹಿಳೆಯರು ಅಡ್ಡಗಟ್ಟಿದರು. ಹಾಗಾಗಿ ಘಟನೆ ಸ್ವಲ್ಪ ತಿಳಿಯಾಗಲಿ ಎನ್ನುವ ಕಾರಣಕ್ಕೆ ಪೊಲೀಸರು ವಾಪಸ್ ಬಂದಿದ್ದಾರೆ” ಎಂದರು.





