ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕಾಂಗ್ರೆಸ್ ಪಕ್ಷದ ತತ್ವಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗರಾಜ ಷ ಹದ್ಲಿ ಕರೆ ನೀಡಿದರು.
ಬಾಗಲಕೋಟೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನವನಗರದ ಮಹಾತ್ಮ ಗಾಂಧಿ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಿನವಿಡೀ ನಡೆದ ಈ ಕಾರ್ಯಾಗಾರದಲ್ಲಿ ಪಕ್ಷದ ಸಂಘಟನೆ, ಸಿದ್ಧಾಂತ, ಸಂವಿಧಾನ ಮತ್ತು ಸಮಕಾಲೀನ ರಾಜಕೀಯ ವಿಚಾರಗಳ ಕುರಿತು ವಿವರವಾದ ಚರ್ಚೆ ನಡೆಯಿತು.
ಕಾರ್ಯಾಗಾರದಲ್ಲಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ಅವರು ಮನರೇಗಾ ಯೋಜನೆ ರದ್ದತಿ ಹಾಗೂ ಅದರ ಪರಿಣಾಮಗಳು ಕುರಿತು ಮಾತನಾಡಿ, “ಮನರೇಗಾ ಗ್ರಾಮೀಣ ಜನರ ಜೀವನಾಧಾರವಾಗಿದ್ದು, ಅದನ್ನು ದುರ್ಬಲಗೊಳಿಸುವ ಕ್ರಮಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಲಿದೆ” ಎಂದು ಹೇಳಿದರು.
ಸಹ ಅಧ್ಯಕ್ಷ ಡಾ. ಎಲ್ ಹನುಮಂತಯ್ಯ ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಭಾರತೀಯ ಸಂವಿಧಾನ ಕುರಿತು ಮಾತನಾಡಿ, “ಸಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ” ಎಂದು ತಿಳಿಸಿದರು.
ಮುಖ್ಯ ಸಂಯೋಜಕ ಸುಧೀರಕುಮಾರ ಮುರೊಳ್ಳಿ ಅವರು ರಾಜಕೀಯ ಕೋಮುವಾದ ಹಾಗೂ ಭಾರತದ ಸಾಮರಸ್ಯ ಕುರಿತು ಮಾತನಾಡಿ, “ಕೋಮುವಾದಿ ರಾಜಕಾರಣದಿಂದ ದೇಶದ ಏಕತೆ ಮತ್ತು ಸಹಬಾಳ್ವೆಗೆ ಅಪಾಯ ಉಂಟಾಗುತ್ತದೆ” ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಅಬ್ದುಲ್ ಮುನೀರ್ ಅವರು ಎಸ್ ಐ ಆರ್ ಮತ್ತು ಬಿ ಎಲ್ ಎಗಳ ಪಾತ್ರ ಕುರಿತು ವಿವರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರ ಸಂಸ್ಥೆಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ಕಾರ್ಯಕರ್ತರಿಗೆ ಅರಿವು ಮೂಡಿಸಿದರು.
ಕಾರ್ಯಾಗಾರದಲ್ಲಿ ಮುಖ್ಯ ಸಂಯೋಜಕ ಶರಣಪ್ಪ ಕೊಟಗಿ, ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ ಹಾಗೂ ಮುಖಂಡ ಮಲ್ಲಿಕಾರ್ಜುನ ಹುಲ್ಲಪ್ಪ ಮೇಟಿ ಅವರು ಮಾತನಾಡಿ, “ಪಕ್ಷದ ಸಂಘಟನೆ ಮತ್ತಷ್ಟು ಬಲಪಡಿಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿದ್ದೀರಾ? ಮನರೇಗಾ ಮರು ಜಾರಿಗೆ ಸ್ಟಾಲಿನ್ ಸರ್ಕಾರ ಆಗ್ರಹ: ವಿಬಿ ಜಿ ರಾಮ್ ಜಿ ವಿರುದ್ದ ಅಂಗೀಕರಿಸಿದ ಗೊತ್ತುವಳಿಗಳೇನು?
ಜಿಲ್ಲೆಯ ವಿವಿಧ ಬ್ಲಾಕ್ಗಳಿಂದ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು. ಇಂತಹ ತರಬೇತಿ ಕಾರ್ಯಾಗಾರಗಳು ಪಕ್ಷದ ಸಂಘಟನೆ ಮತ್ತು ಮುಂದಿನ ರಾಜಕೀಯ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡಲಿವೆ ಎಂದು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಮೇಶ ಮೇಟಿ ಸಂಯೋಜಕ ಪಿ ಕೆ ನೀರಲಕಟ್ಟಿ ಅವರು ಉಪಸ್ಥಿತರಿದ್ದರು. ಸುನೀಲ ಬಾಲಗಾವಿ ಅವರು ಸ್ವಾಗತ ಭಾಷಣ ಮಾಡಿದರು. ಶ್ರೀದರ ನೀಲನಾಯಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.





