ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆಪರಿಹಾರ ವಿಮೆ ಮಾಡಿಸುವಲ್ಲಿ ವಂಚನೆ ಎಸಗಿರುಗಿರುವ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಎಸ್ಪಿ ಸಿದ್ದಾರ್ಥ ಗೋಯಲ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, “ವಿಮಾ ಕಂಪೆನಿಯೊಂದರ ರಾಕೇಶ್, ಅನಿಲ್ ಬೀಳಗಿ, ಬಾಲುರಾಜು ಪಾಳೇಗಾರ, ಗಂಗಪ್ಪ ಕೃಷ್ಣ ಬಂಧಿತರು. ಕಲ್ಲಪ್ಪ ಹುಣಸಿಕಟ್ಟಿ ಸೇರಿದಂತೆ 9 ಜನರ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ” ಎಂದು ತಿಳಿಸಿದ್ದಾರೆ.
“ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ತದ್ದಲಿಂಗೇಶ ದೊಡ್ಡಮನಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರನ್ನು ಬಂಧಿಸಲು ಶೋಧನೆ ನಡೆದಿದ್ದು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹಣ ಲಪಟಾಯಿಸಿರುವುದನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ” ಎಂದರು.
“ವಿಮಾ ಕಂಪೆನಿಗಳ ಪ್ರತಿನಿಧಿಗಳು, ಏಜೆಂಟರು ವಂಚನೆಯಲ್ಲಿ ಭಾಗಿಯಾಗಿದ್ದಾರೆ. ರೈತರಿಂದ ಜಮೀನು ದಾಖಲೆ, ಪಾಸ್ ಬುಕ್, ಆಧಾರ್ ಕಾರ್ಡ್ ವಿವರ ಪಡೆದು ಬೆಳೆ ವಿಮೆಗಾಗಿ ನೋಂದಾಯಿಸಲಾಗುತ್ತದೆ. ಈ ಪೈಕಿ ಹಲವು ಜಮೀನುಗಳಲ್ಲಿ ಬೆಳೆ ಬೆಳೆಯದಿದ್ದರೂ ದಾಖಲೆಗಳಲ್ಲಿ ಮಾಹಿತಿ ದಾಖಲಿಸಲಾಗುತ್ತಿತ್ತು. ಈ ಮಧ್ಯ ಹಲವು ರೈತರು ಬೇರೆ ಬೆಳೆ ಬೆಳೆದಿದ್ದರೂ ಹೆಚ್ಚಿನ ಪರಿಹಾರ ದೊರೆಯುವ ಬೆಳೆ ಬೆಳೆದಿರುವುದು ದಾಖಲೆಯಲ್ಲಿ ತೋರಿಸಲಾಗಿತ್ತು. ನಂತರ ಬೆಳೆಹಾನಿ ಎಂದು ಮಾಹಿತಿ ನೀಡಿ ಪ್ರತಿ ಎಕರೆಗೆ ಅಂದಾಜು ₹15,000ದಿಂದ ₹20,000 ಪರಿಹಾರ ಪಡೆಯಲಾಗುತ್ತಿತ್ತು. ಹೋಬಳಿಯೊಂದರಲ್ಲೇ ವರ್ಷಕ್ಕೆ ಅಂದಾಜು 600 ಎಕರೆ ಜಮೀನಿಗೆ ಹೀಗೆ ವಿಮೆ ಮಾಡಿಸಲಾಗುತ್ತಿತ್ತು. ಮುಧೋಳ ತಾಲೂಕಿನ ಮೆಟಗುಡ್ಡ, ಗುಲಗಾಲಜಂಬಗಿ ಗ್ರಾಮಸ್ಥರು ಈ ಕುರಿತು ಉಪವಿಭಾಗ ಅಧಿಕಾರಿಗೆ ದೂರು ನೀಡಿದ್ದರು. ಕೃಷಿ ಇಲಾಖೆ, ಕಂದಾಯ ಇಲಾಖೆಯಿಂದ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ವಂಚನೆ ಪ್ರಕರಣ ಬಯಲಾಗಿದೆ” ಎಂಬುದನ್ನು ತಿಳಿಸಿದರು.
“ಈವರೆಗೆ 28 ಲಕ್ಷ ರೂಪಾಯಿ ಲಪಟಾಯಿಸಿರುವುದು ತನಿಖೆಯಿಂದ ಹೊರಬಿದ್ದಿದೆ. 2021ರಿಂದ 2025ರ ವರೆಗೆ ಅಂದಾಜು 30 ಕೋಟಿ ರೂ. ವಂಚಿಸಿರಬಹುದು ಎನ್ನಲಾಗಿದೆ. ಜಿಲ್ಲೆಯ ಬೀಳಗಿ, ಹುನಗುಂದ ತಾಲೂಕುಗಳಲ್ಲೂ ಇಂತಹ ವಂಚನೆ ಪ್ರಕರಣಗಳು ನಡದಿವೆ. ಸದ್ಯ ಪೊಲೀಸರು ಇಂತಹ ವಂಚನೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆಗೆ ಸಮರ್ಥ್, ಬಾಗಲಕೋಟೆಗೆ ಉಮೇಶ್: ಕಾಂಗ್ರೆಸ್ ಅಧಿಕೃತ ಘೋಷಣೆ
ಪ್ರಕರಣದ ತನಿಖೆಗೆ ವಿಷೇಶ ತನಿಖಾ ತಂಡ ರಚಿಸಲಾಗಿದೆ. ವಿಮಾ ಕಂಪನಿಗಳ ಏಜಂಟರು, ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.





