ಮಹಾತ್ಮ ಗಾಂಧಿ ನರೇಗಾ ಕಾಯ್ದೆಯನ್ನು ಬದಲಾವಣೆ ಮಾಡಿ ವಿಬಿ ಜಿ ರಾಮ್ ಜಿ ಅಂಗೀಕಾರ ಮಾಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್ ಜಿ ನಂಜಯ್ಯನಮಠ ಹೇಳಿದರು.
ಬಾಗಲಕೋಟೆಯ ನವನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಜಗತ್ತಿನ 255 ದೇಶಗಳಲ್ಲೂ ಗೌರವಿಸಲ್ಪಡುವ ವ್ಯಕ್ತಿ ಮಹಾತ್ಮ ಗಾಂಧಿ ಹೆಸರು ತೆಗೆಯುವ ಮೂಲಕ ಪ್ರಧಾನಿ ಮೋದಿ ತಮ್ಮ ಕುಹಕ ಬುದ್ಧಿ ತೋರಿಸಿದ್ದಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಡಿಸೆಂಬರ್ 22ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆ ಎಲ್ಲ ಮತಕ್ಷೇತ್ರಗಳು ಹಾಗೂ ಆಯ್ದ ನಗರ ಪ್ರದೇಶಗಳಲ್ಲೂ ನಡೆಯಲಿದೆ” ಎಂದು ತಿಳಿಸಿದರು.
“ಹೊಸ ಯೋಜನೆಗಳನ್ನು ಮಾಡಿ ಜಿ-ರಾಮ್-ಜಿ ಹೆಸರಿಟ್ಟರೂ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈಗಿರುವ ಮಹಾತ್ಮ ಗಾಂಧಿ ನರೇಗಾ ಎಂಬ ಹೆಸರು ಬದಲಾಯಿಸುವುದು ಮೋದಿ ಅವರ ಕುಹಕ ರಾಜಕಾರಣವಾಗಿದ್ದು, ದಬ್ಬಾಳಿಕೆಯ ಕ್ರಮವಾಗಿದೆ” ಎಂದು ನಂಜಯ್ಯನಮಠ ಹೇಳಿದರು.
“ಮುಖ್ಯಮಂತ್ರಿ ಸ್ಥಾನದ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನೋವು ತಂದಿವೆ. ಇದು ಪಕ್ಷ ಹಾಗೂ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಹೈಕಮಾಂಡ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎನ್ನುವುದು ನನ್ನ ನಿಲುವು” ಎಂದವರು ತಿಳಿಸಿದರು.
“ಬಾಗಲಕೋಟೆ ಮತಕ್ಷೇತ್ರಕ್ಕೆ ನಡೆಯಬೇಕಿರುವ ಉಪ ಚುನಾವಣೆಗೆ ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಿದೆ. ಈತನಕ ತಾವು ಆಕಾಂಕ್ಷಿಗಳು ಎಂದು ಯಾರೂ ಅರ್ಜಿ ನೀಡಿಲ್ಲ” ಎಂದು ನಂಜಯ್ಯನಮಠ ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ: ಎಐಡಿಎಸ್ಒ ಖಂಡನೆ
“ಬಿಟಿಡಿಎದಲ್ಲಿ ಸಂತ್ರಸ್ತರಿಗೆ ಆಗುತ್ತಿರುವ ತೊಂದರೆಗಳು, ನಗರದ ಸ್ವಚ್ಛತೆ ಸೇರಿ ಜನರಿಗೆ ಆಗುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ಮುಖ್ಯ ಅಭಿಯಂತರರಿಗೆ ಸಲ್ಲಿಸಿ ಸಮಸ್ಯೆಗಳ ಪರಿಹಾರಕ್ಕೆ ಸಮಯ ನಿಗದಿ ಮಾಡಲಾಗುವುದು. ನಗರದ ಹಿತದೃಷ್ಟಿಯಿಂದ ಬಿಟಿಡಿಎ ಅಧ್ಯಕ್ಷ ಹಾಗೂ ಸದಸ್ಯರ ನೇಮಕದ ವಿಷಯವನ್ನು ಸಿಎಂ, ಡಿಸಿಎಂ ಗಮನಕ್ಕೆ ತರಲಾಗುವುದು” ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ದಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಅಭಿಷೇಕ ತಳ್ಳಿಕೇರಿ, ಸಿಕಂದರ ಅಥಣಿ, ಶ್ರವಣ ಖಾತೆದಾರ ಇದ್ದರು.





