ಗ್ರಾಮೀಣ ಕೂಲಿಕಾರ ಕಾರ್ಮಿಕರ ಸಂಘಟನೆ ಬಾಗಲಕೋಟೆ ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕಾಗಿದ್ದ ಮನರೇಗಾ ಕಾನೂನನ್ನು ರದ್ದುಗೊಳಿಸಿ ಉದ್ಯೋಗವನ್ನು ಕೇಂದ್ರ ಸರ್ಕಾರದ ಮರ್ಜಿಗೆ ಒಳಪಡಿಸುವ ಹೊಸ ವಿಬಿ ಜಿ ರಾಮ್ಜಿ ಕಾನೂನು ಕಾರ್ಮಿಕರನ್ನು ಗುಲಾಮರನ್ನಾಗಿಸುವ ಅಪಾಯಕಾರಿ ಕ್ರಮವಾಗಿದ್ದು, ಇದಕ್ಕೆ ಮನರೇಗಾ ಕಾರ್ಮಿಕರು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಕನಿಷ್ಠ ವೇತನದ ಹಕ್ಕನ್ನು ಬದಿಗೆ ಸರಿಸಿ, ಕೇಂದ್ರ ಸರ್ಕಾರವೇ ವೇತನ ನಿಗದಿಪಡಿಸುವ ವ್ಯವಸ್ಥೆ ಮೂಲಕ ವಲಸೆಯನ್ನು ಹೆಚ್ಚಿಸಿ, ಕಾರ್ಮಿಕರನ್ನು ಗುತ್ತಿಗೆದಾರರಿಗೆ ಅಗ್ಗದ ಕೂಲಿಗೆ ಪೂರೈಸುವ ಈ ಕಾನೂನನ್ನು ನಾವು ತಿರಸ್ಕರಿಸುತ್ತೇವೆ ಎಂದು ಒತ್ತಾಯಿಸಿದರು. ಈಗಾಗಲೇ ಜನವರಿ 26ರಂದು ನಡೆದ ಗ್ರಾಮಸಭೆಯಲ್ಲಿ ಹೊಸ ಕಾನೂನಿಗೆ ವಿರೋಧ ವ್ಯಕ್ತಪಡಿಸಿ ಸರ್ವಾನುಮತದಿಂದ ಠರಾವು ಪಾಸು ಮಾಡಲಾಗಿದೆ ಎಂದರು.
ಇದನ್ನೂ ಓದಿ: ಬಾಗಲಕೋಟೆ | ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ
ಬೇಡಿಕೆ ಆಧಾರಿತ, ಸಾರ್ವತ್ರಿಕ ಮತ್ತು ಉದ್ಯೋಗದ ಹಕ್ಕನ್ನು ಖಾತ್ರಿಪಡಿಸುವ ಮನರೇಗಾ ಕಾನೂನನ್ನು ಮರುಸ್ಥಾಪಿಸಬೇಕು ಹಾಗೂ ವಿಬಿ ಗ್ರಾಮ್ ಜಿ ಕಾನೂನನ್ನು ತಕ್ಷಣ ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಗಾಂಧಿ ಹುತಾತ್ಮರಾದ ದಿನದಂದು ಗಾಂಧೀಜಿಯ ಆಶಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಮೌನ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಮುಖರಾದ ಶಂಕರ್ ಹೂಗಾರ, ಮಹಾಂತೇಶ ಹೊಸಮನಿ, ಬಸವರಾಜ ದೊಡ್ಡಮನಿ, ರೇಖಾ ಬಾದಾಮಿ, ಶಿಲ್ಪಾ ಮುಧೋಳ, ಸಕ್ಕುಬಾಯಿ, ಸವಿತಾ, ಶಾರದಾ, ಸೈರಾಬಾನು, ವಿಜಯಲಕ್ಷ್ಮಿ, ಯಮನೂರ, ರಾಜ್ಯ ಮಹಿಳಾ ಒಕ್ಕೂಟದ ರೇಖಾ ತೊಗುಣಸಿ, ರೇಣುಕಾ, ಮಹಾದೇವಿ, ಪರಶುರಾಮ, ಯಲ್ಲಮ್ಮ, ರೇಣುಕಾ, ಯಮನವ್ವ ಗುಳೇದಗುಡ್ಡ, ಬೋರಮ್ಮ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.





