ಮೋಟಾರ್ ಸೈಕಲ್ ಕಳ್ಳತನದ ಜಾಲ ಭೇದಿಸಿರುವ ಹುನಗುಂದ ಪೊಲೀಸರು, ಕಳ್ಳತನವಾಗಿದ್ದ 27 ಮೋಟರ್ ಸೈಕಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಭಾಗಿಯಾದ ಮೂವರ ವಿರುದ್ದ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಬೈಕ್ ಕಳೆದುಕೊಂಡಿದ್ದ ತಾಲೂಕಿನ ಹಡಗಲಿ ಗ್ರಾಮದ ಸಂಗಪ್ಪ ಬಸಪ್ಪ ಅಂಗಡಿ ನೀಡಿದ ದೂರಿನ ಮೇರೆಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ, ಸಂತೋಷ ಬನ್ನಟ್ಟಿ, ಸಿಪಿಐ. ಎಸ್.ಬಿ. ಅಜೂರ ಮಾರ್ಗದರ್ಶನದಲ್ಲಿ ಪಿಎಸ್ಐ, ಎಸ್.ಜಿ. ಆಲದಕಟ್ಟಿ ನೇತೃತ್ವದ ತಂಡ ಈ ಕುರಿತು ತನಿಖೆ ಕೈಗೊಂಡಿತ್ತು ಎಂದು ಮಾಹಿತಿ ನೀಡಿದರು.
ಯಾದಗಿರಿಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದ ಹುಲಗಪ್ಪ ಹನಮಂತ ಮೋಡಕೇರ, ರಾಯಚೂರು ಜಿಲ್ಲೆ ದೇವದುರ್ಗ ಮೂಲದ ಹಣಮಂತ ರಾಮಣ್ಣ ಮೋಡಕೇರ ಹಾಗೂ ಆಂಜನೇಯ ಬಂಧಿತ ಆರೋಪಿಗಳು. ಇವರಿಂದ ಒಟ್ಟು 27 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ ಸುಮಾರು ₹16 ಲಕ್ಷ ಆಗಬಹುದು. ಅಮೀನಗಡ ಠಾಣೆಯಲ್ಲಿ 30, ಇಳಕಲ್ ಠಾಣೆಯಲ್ಲಿ 5, ಹುನಗುಂದ ಠಾಣೆಯಲ್ಲಿ 27 ಸೇರಿ ಒಟ್ಟು 62 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶ ಪಡಿಸಿಕೊಂಡ ಬೈಕ್ಗಳು ರಾಜ್ಯವಲ್ಲದೇ ಹೊರ ರಾಜ್ಯಕ್ಕೂ ಸೇರಿದ್ದಾಗಿವೆ. ಇದು ವರ್ಷದ ದೊಡ್ಡ ಪ್ರಕರಣ ಎಂದು ಹೇಳಿದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಸಿಪಿಐ ಎಸ್.ಬಿ. ಅಜೂರ, ಪಿಎಸ್ಐ.ಗಳಾದ ಎಸ್.ಜಿ. ಆಲದಕಟ್ಟಿ ಹಾಗೂ ಎನ್.ಎಸ್. ಸಿಮಾನಿ, ಸಿಬ್ಬಂದಿಗಳಾದ ಎಸ್.ಬಿ. ಅಮಲಿಹಾಳ, ಆಯ್.ಎಸ್. ಮಂಟ್ಕಾಳ, ಕೆ.ವಾಯ್. ವಾಲಿಕಾರ, ಎಂ.ಎಸ್. ನಾರಗಲ್ಲ, ಸಿದ್ದಪ್ಪ ಕೌಲಗಿ, ಬಿ.ಎನ್. ಗೌಡರ, ಎ.ಬಿ. ಯರದಾಳ, ಯಲ್ಲಪ್ಪ ಅಂಬಿಗೇರ, ಗಣೇಶ ಪವಾರ, ಆನಂದ ಗೋಲಪ್ಪನವರ, ಚಂದ್ರು ಜಟ್ಟೆಪ್ಪಗೋಳ, ಬಸವರಾಜ ಜಗಲಿ ಇವರ ಕಾರ್ಯವನ್ನು ಎಸ್ಪಿ ಸಿದ್ದಾರ್ಥ ಶ್ಲಾಘಿಸಿದರು.
ಇದನ್ನೂ ಓದಿ: ಮುಂಡಗೋಡ | ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು 20 ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣಾ ಶಿಬಿರಕ್ಕೆ ಚಾಲನೆ
ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಿಪಿಐ ಎಸ್.ಬಿ. ಅಜೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





