ಸಂತ ಸೇವಾಲಾಲರು ಧಾರ್ಮಿಕ ನಾಯಕರು ಮಾತ್ರವಲ್ಲ ಸಮಾಜ ಸುಧಾರಕರೂ ಆಗಿದ್ದರು. ಅಂಧಶ್ರದ್ದೆ, ಮೂಢನಂಬಿಕೆ ಹೋಗಲಾಡಿಸಿ, ನೈತಿಕ ಮಾರ್ಗದಲ್ಲಿ ಸತ್ಪ್ರಜೆಗಳಾಗಿ ಬದುಕಲು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಕಂಠಿ ವೃತ್ತದಲ್ಲಿ ತಾಲ್ಲೂಕಾಡಳಿತ, ತಾಲ್ಲೂಕು ಬಂಜಾರ ಸಮಾಜ, ಸೇವಾಲಾಲ ಜಯಂತ್ಯುತ್ಸವ ಸಮಿತಿ ಆಯೋಜಿಸಿದ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
“ಪರಿಶ್ರಮ ಹಾಗೂ ಸ್ವಾಭಿಮಾನದಿಂದ ಜೀವನ ಕಟ್ಟಿಕೊಂಡಿರುವ ಸಮುದಾಯ ಬಂಜಾರ. ಈ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಂಜಾರ ಸಮಾಜದ ಬೇಡಿಕೆಗಳಿಗೆ ನಮ್ಮ ಸರ್ಕಾರ ಸ್ಪಂದಿಸಿದ್ದು ಬಂಜಾರ ಸಮುದಾಯ ಭವನ ನಿರ್ಮಾಣಕ್ಕೂ ಅನುದಾನ ನೀಡುವೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿ: ರಬಕವಿ ಬನಹಟ್ಟಿ | ಚಿನ್ನ ಕಳುವು ಪ್ರಕರಣ ಭೇದಿಸಿದ ಪೊಲೀಸರು; ₹2.50 ಲಕ್ಷ ಮೌಲ್ಯದ ಆಭರಣ ವಶಕ್ಕೆ
ಸಮಾರಂಭಕ್ಕೂ ಮುನ್ನ ನಡೆದ ಬೈಕ್ ರ್ಯಾಲಿಯಲ್ಲಿ ಅವರು ಪಾಲ್ಗೊಂಡರು. ಸಂತ ಸೇವಾಲಾಲ ದೇವಸ್ಥಾನ, ವೃತ್ತ, ಸಮುದಾಯ ಭವನದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಸಮಾರಂಭದಲ್ಲಿ ಕುಮಾರ ಮಹಾರಾಜ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ ರಾಠೋಡ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪರಶುರಾಮ ಪಮ್ಮಾರ, ದೀಪಕ ರಾಠೋಡ ಭಾಗವಹಿಸಿದ್ದರು.





