ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ದಲಿತ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ(ಡಿ ಜೆ ಸಾಗರ ಬಣ) ಬಾಗಲಕೋಟೆ ಜಿಲ್ಲಾ ಸಮಿತಿಯಿಂದ ಜಮಖಂಡಿ ವಲಯದ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
“ಸಾವಳಗಿ ಗ್ರಾಮದಲ್ಲಿ ಮಾರ್ಚ್ 11ರಂದು ದಲಿತ ಯುವಕ(ಸುದೀಪ ಬಸಪ್ಪ ಪಾಂಗೆ)ನ ಹತ್ಯೆಯಾಗಿರುವುದು ಖಂಡನೀಯ. ಅಂದು ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಗ್ರಾಮದ ಸಾರ್ವಜನಿಕರು ಮತ್ತು ವಿದ್ಯಾರ್ಥಿನಿಯರ ಬೋಧಕರು ಭಾಗವಹಿಸುವುದು ಸಹಜ. ಆದರೆ ಈ ಕಾರ್ಯಕ್ರಮಕ್ಕೆ ಬಂದೋಬಸ್ತ್ ಅಥವಾ ಪರವಾನಿಗೆ ಪಡೆದುಕೊಂಡಿದ್ದರ ಬಗ್ಗೆ ತನಿಖೆ ಮಾಡಬೇಕಿತ್ತು. ಆದರೆ ಯಾವುದೇ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿರಲಿಲ್ಲ” ಎಂದು ದೂರಿದರು.
“ಸಾರ್ವಜನಿಕರು ಸಾಕಷ್ಟು ಜನರಿದ್ದರೂ ಕೂಡ ಸಾಯುವ ಮಟ್ಟಕ್ಕೆ ಹಲ್ಲೆ ಮಾಡಿರುವುದನ್ನು ನೋಡಿದರೆ, ಸ್ಥಳೀಯ ಪೊಲೀಸರ ಕರ್ತವ್ಯದ ಬಗ್ಗೆ ಅನುಮಾನ ಬರುವುದು ಸಹಜ. ಸ್ಥಳೀಯವಾಗಿಯೇ ಠಾಣೆ ಇದ್ದು, ಸುಮಾರು 30 ಮಂದಿಗೂ ಅಧಿಕ ಸಿಬ್ಬಂದಿಗಳಿದ್ದರೂ, ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿದುಕೊಂಡು ಬಂದೋಬಸ್ತ್ ಕಾರ್ಯ ನಿರ್ವಹಿಸಬಹುದಾಗಿತ್ತು. ಆದರೆ ಇಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ದಲಿತ ಯುವಕನ ಹತ್ಯೆಯಾಗಿದೆ” ಎಂದು ಆರೋಪಿಸಿದರು.
“ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಿಸಿಟಿವಿ ವಿಡಿಯೊ ನೋಡಿದರೆ ಆರೋಪಿಗಳಿಗೆ ಯಾವುದೇ ರೀತಿಯ ಕಾನೂನಿನ ಭಯ ಇಲ್ಲದಿರುವುದು ಸಾಬೀತಾಗುತ್ತದೆ. ವಿಡಿಯೊದಲ್ಲಿ ಕಾಣುವಂತಹ ಮತ್ತು ಈ ಘಟನೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದಂತಹ ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಕರ್ತವ್ಯ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಪ್ರೀತಿ-ಸ್ನೇಹವೇ ನಿಜವಾದ ದೇವರು: ಸಾಹಿತಿ ಪ್ರೊ. ತುಕಾರಾಂ
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ಜಮಖಂಡಿ ತಾಲೂಕು ಸಂಚಾಲಕರಾದ ದೀಪಕ ಕಂಕಣವಾಡಿ, ರಬಕವಿ ಬನಹಟ್ಟಿ, ತಾಲೂಕು ಸಂಚಾಲಕರು ಬಸವರಾಜ ದೊಡಮನಿ, ಸಾವಳಗಿ ವಲಯ ಸಂಚಾಲಕರು ಅಮಿತ್ ಸೂರಗೊಂಡ್, ಸದಾಶಿವ ಐನಾಪುರ, ಅಶೋಕ ಸಿಂಗೆ, ಶಾಮ್ ಹಿಪ್ಪರಗಿ, ಶಂಕರ ಹೊಸಮನಿ, ಶಹಜಾನಂದ ದೊಡ್ಡಮನಿ, ಸೋಮು ಶಿಂಗೆ, ವಿಠ್ಠಲ ಕಾಂಬ್ಳೆ, ವಿದ್ಯಾಸಾಗರ್ ಹೊಸಮನಿ, ಬಸವರಾಜ ಶ್ರೀನಾಥ, ಹಣಮಂತ ಶಿಂಗೆ ಇನ್ನೂ ಅನೇಕ ಪದಾಧಿಕಾರಿಗಳು ಇದ್ದರು.





