ಜೀವನಾಂಶ ಪ್ರಕರಣದ ವಿಚಾರಣೆಗೆ ಹಾಜರಾಗಲು ಆಗಮಿಸಿದ್ದ ವ್ಯಕ್ತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಬಕವಿ ಬನಹಟ್ಟಿಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ಹಾಜರಾಗಲು ಬಂದಿದ್ದ ಯಾಕೂಬ್ ದೊಡಮನಿ (35) ಆತ್ಮಹತ್ಯೆಗೆ ಯತ್ನಿಸಿದವರು. ಸ್ಥಳದಲ್ಲಿದ್ದ ನ್ಯಾಯವಾದಿಗಳು ತಕ್ಷಣ ಯಾಕೂಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾಕೂಬ್ ಅವರ ಪತ್ನಿ ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದ ಯಾಕೂಬ್ ತಮ್ಮ ನ್ಯಾಯವಾದಿಗೆ ಒಂದು ಚೀಟಿ, ಪೆನ್ ಡ್ರೈವ್ ನೀಡಿದ್ದರು. ಇದರಲ್ಲಿ ಎಲ್ಲಾ ಮಾಹಿತಿ ಇದೆ ಎಂದು ಹೇಳಿದ ಅವರು ವಿಷ ಸೇವಿಸಿದರು. ನ್ಯಾಯವಾದಿಗಳು ತಕ್ಷಣ ಅವರ ಕೈಯಲ್ಲಿದ್ದ ವಿಷದ ಬಾಟಲಿ ಕಸಿದುಕೊಂಡರು. ಪ್ರಸನ್ನದ ಬಗ್ಗೆ ಕಿರಿಯ ಶ್ರೇಣಿ ನ್ಯಾಯಾಲಯದ ಶಿರಸ್ತೆದಾರ ಎಸ್ ಎಸ್ ಗುಡ್ಲಿಮನಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸಿ ಪಿ ಐ ಎಚ್ ಆರ್ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆದಿದೆ.
ಇದನ್ನೂ ಓದಿ: ಬಾಗಲಕೋಟೆ | ವಿವಾಹೇತರ ಸಂಬಂಧದ ಅನುಮಾನ; ಪತ್ನಿಯ ತಲೆ ಬೋಳಿಸಿದ ವಿಕೃತ ಪತಿ






