ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಸೋತಂತ ವ್ಯಕ್ತಿ, ʼಸುಬ್ಬಾರೆಡ್ಡಿಯವರ ವಿದೇಶದಲ್ಲಿ ಆಸ್ತಿ ಇದೆ. ಇವರ ಚುನಾವಣೆ ಅಫಿಡವಿಟ್ ಸರಿಯಿಲ್ಲʼ ಅಂತ ಕೇಸ್ ಹಾಕಿರುವ ಹಿನ್ನೆಲೆಯಲ್ಲಿ ನನ್ನ ಮೇಲೆ ಇ.ಡಿ ದಾಳಿ ನಡೆದಿದ್ದು, ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.
“ಇ.ಡಿ ಅಧಿಕಾರಿಗಳು ನನಗೆ ಮಲೇಷ್ಯಾದಲ್ಲಿ ನಿಮ್ಮ ಪ್ರಾಪರ್ಟಿ ಇದೆಯಾ ಅಂತ ಕೇಳ್ತಾರೆ, ಒಂದು ತಿಂಗಳ ಹಿಂದೆ ನನ್ನ ಸ್ನೇಹಿತರ ಮುಖಾಂತರ ನನಗೆ ವಾಟ್ಸ್ಯಾಪ್ ಮೆಸೇಜ್ ಬಂದಿದ್ದು, ವೀರಸ್ವಾಮಿ ರಂಗಸ್ವಾಮಿ ಯಾರು? ಅವರು ನನ್ನ ಆಸ್ತಿ ಇರುವಂತೆ ಒಂದು ಫೇಕ್ ಡ್ಯಾಕುಮೆಂಟ್ ಕ್ರೀಯೇಟ್ ಮಾಡಿದ್ದಾರೆ. ನಾನು ಆವತ್ತೆ ಬೆಂಗಳೂರು ಉತ್ತರ ಸೈಬರ್ ಕ್ರೈಂಗೆ ಹೋಗಿ ಕಂಪ್ಲೇಂಟ್ ಮಾಡಿದ್ದೆ. ಆದರೆ ಅವರು ನಿರ್ದಿಷ್ಟವಾಗಿ ವ್ಯಕ್ತಿ ಇಲ್ಲದೆ FIR ಮಾಡುವುಕ್ಕೆ ಆಗುವುದಿಲ್ಲವೆಂದು ಹೇಳಿದರು” ಎಂದರು.
“ವಿನಾಕಾರಣ, ಸತ್ಯಾಸತ್ಯತೆ ತಿಳಿಯದೆ ಅಧಿಕಾರಿಗಳು ನನ್ನ ಮೇಲೆ ದಾಳಿ ಮಾಡಿ ಹಲವಾರು ಪ್ರಶ್ನೆಗಳನ್ನು ಕೇಳಿದರು. ನಾನು ಇದನ್ನು ರಾಜಕೀಯ ಪ್ರೇರಿತ ಅಂತ ಹೇಳುವುದಿಲ್ಲ, ನನಗೆ ನಂಬಿಕೆ ಇದೆ. ನಾನಂತೂ ರಾಜಕೀಯದಲ್ಲಿ, ನನ್ನ ಜೀವನದಲ್ಲಿ ಯಾವುದೇ ಆಸೆ ಆಕಾಂಕ್ಷೆಗಳಿಗೆ ಆಸೆ ಪಡದೆ ಜೀವನ ನಡೆಸುತ್ತಿದ್ದೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಅನುದಾನದ ನಿರೀಕ್ಷೆಯಲ್ಲಿ ಬಿದರೆ ಸರ್ಕಾರಿ ಶಾಲೆ; ಹಳೆ ವಿದ್ಯಾರ್ಥಿಗಳಿಂದ ಮರುಜೀವ
“ಯಾವತ್ತೂ ಸರ್ಕಾರಕ್ಕೆ ಮೋಸ ಮಾಡುವ ಸುಳ್ಳು ಪ್ರಮಾಣ ಪತ್ರ ಕೊಡುವ ಕೆಲಸ ಮಾಡಿಲ್ಲ, ಕೆಲವರು ನಮ್ಮ ರಾಜಕೀಯ ವಿರೋಧಿಗಳ ಕುತಂತ್ರ ಬಿಟ್ಟರೆ, ಇದರಲ್ಲಿ ಯಾವುದೇ ಸತ್ಯ ಇಲ್ಲ. ನನಗೆ ವಿದೇಶದಲ್ಲಿ ಏನಾದ್ರೂ ಆಸ್ತಿ ಇದ್ದರೆ, ಇಡೀ ನನ್ನ ಆಸ್ತಿಯನ್ನು ನಿಮ್ಮ ಸರ್ಕಾರಕ್ಕೆ ಬರೆದು ಕೊಡುತ್ತೇನೆಂದು ನಾನು ಇ.ಡಿ ಅಧಿಕಾರಿಗಳಿಗೆ ಹೇಳಿದ್ದೇನೆ. ಇ.ಡಿ ಅಧಿಕಾರಿಗಳು 14ನೇ ತಾರೀಖು ವಿಚಾರಣೆಗೆ ಕರೆದಿದ್ದಾರೆ. ನಾನು ವಿಚಾರಣೆಗೆ ಹಾಜರಾಗುತ್ತೇನೆ” ಎಂದು ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಹೇಳಿದರು.





