ಬನವಾಸಿ: ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೋರಿ ಹಬ್ಬದ ಪ್ರಯುಕ್ತ ಅಳವಡಿಸಲಾಗಿದ್ದ ಬ್ಯಾನರ್ಗಳನ್ನು ತೆರವುಗೊಳಿಸಲು ಹೋದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ
ಘಟನೆಯ ವಿವರ: ಬದನಗೋಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಪರಸಪ್ಪ ಪುಟ್ಟಪ್ಪ ಲಮಾಣಿ ಅವರು ನೀಡಿದ ದೂರಿನ ಪ್ರಕಾರ, ಫೆಬ್ರವರಿ 7 ರಿಂದ 8ರ ವರೆಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಟರಾಜ ಭೀಮಪ್ಪ ಹೊಸೂರು ಎಂಬುವವರು ಅನುಮತಿ ಇಲ್ಲದೆ ಗ್ರಾಮದ ವಿವಿಧೆಡೆ ಬ್ಯಾನರ್ ಮತ್ತು ಫ್ಲೆಕ್ಸ್ ಬೋರ್ಡ್ಗಳನ್ನು ಅಳವಡಿಸಿದ್ದರು.
ಕಾರ್ಯಕ್ರಮ ಮುಗಿದ ನಂತರವೂ ಇವುಗಳನ್ನು ತೆರವುಗೊಳಿಸದ ಕಾರಣ, ಪಂಚಾಯತ್ ಅಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿದ್ದರು. ಆದರೂ ಬ್ಯಾನರ್ಗಳನ್ನು ತೆಗೆಯದ ಹಿನ್ನೆಲೆಯಲ್ಲಿ, ಸಹಾಯಕ ಆಯುಕ್ತರ ಸೂಚನೆಯಂತೆ ಪಂಚಾಯತ್ ಸಿಬ್ಬಂದಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದರು.
ಫೆಬ್ರವರಿ 20ರಂದು ಮಧ್ಯಾಹ್ನ ಸುಮಾರು 1:00 ಗಂಟೆಗೆ ಶಿರಸಿ-ಹಾವೇರಿ ರಸ್ತೆಯ ದನಗನಹಳ್ಳಿ ಕ್ರಾಸ್ ಹತ್ತಿರ ಪಂಚಾಯತ್ ಕಾರ್ಯದರ್ಶಿ ದಶರಥರಾಜ ಬೂದಿಹಾಳಕರ ಮತ್ತು ಸಿಬ್ಬಂದಿಗಳು ಬ್ಯಾನರ್ ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಮೋಟಾರ್ ಸೈಕಲ್ನಲ್ಲಿ ಬಂದ ನಟರಾಜ ಹೊಸೂರು, ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಕಾರ್ಯದರ್ಶಿ ದಶರಥರಾಜ ಅವರ ಜಾತಿಯನ್ನು ಉಲ್ಲೇಖಿಸಿ ಅತ್ಯಂತ ಕೀಳಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಪ್ರಯಾಣಿಕರ ಗಮನಕ್ಕೆ: ಮಾರಿಕಾಂಬಾ ಜಾತ್ರೆ ಹಿನ್ನೆಲೆ ಬಸ್ ಸಂಚಾರ ಮಾರ್ಗ ಬದಲಾವಣೆ
“10 ಲಕ್ಷ ರೂಪಾಯಿ ಖರ್ಚಾದರೂ ಪರವಾಗಿಲ್ಲ, ನಿಮ್ಮೆಲ್ಲರ ಹೆಣ ಹೊರುತ್ತೇನೆ” ಎಂದು ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರವೀಣ್ ರಾಮಾಪುರ ಮತ್ತು ಇಮ್ರಾನ್ ಅಲಿಯಾಸ್ ಮಂಡಕ್ಕಿ ಎಂಬುವವರು ಕೂಡ ನಟರಾಜನಿಗೆ ಸಾಥ್ ನೀಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ದರ್ಪ ತೋರಿದ್ದಾರೆ ಎಂದು ತಿಳಿದುಬಂದಿದೆ.
ಕಾನೂನು ಕ್ರಮಕ್ಕೆ ಆಗ್ರಹ: ಆರೋಪಿತರು ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿಗಳಾಗಿದ್ದರಿಂದ ಭಯಭೀತರಾದ ಸಿಬ್ಬಂದಿಗಳು ಘಟನೆಯ ವಿಡಿಯೋ ದಾಖಲಿಸಿ ಪಂಚಾಯತ್ಗೆ ಮರಳಿದ್ದಾರೆ. ನಂತರ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸರ್ಕಾರಿ ನೌಕರರ ಮೇಲೆ ಹಲ್ಲೆ ಯತ್ನ, ಜಾತಿ ನಿಂದನೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪಿಡಿಒ ಪರಸಪ್ಪ ಲಮಾಣಿ ಅವರು ಒತ್ತಾಯಿಸಿದ್ದಾರೆ.





