ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಕೊಡ ಮಾಡುವ ‘ಬಿ ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯ ಮೂಲಕ ಮಾಹಿತಿ ನೀಡಿರುವ ಸಂಘ, “2022-23ನೇ ಸಾಲಿನ ಬಿ ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗೆ ಸುದ್ದಿ ಮಾಧ್ಯಮಕ್ಷೇತ್ರದಲ್ಲಿ ದಲಿತರು – ದಮನಿತರ ಪರವಾಗಿ ದುಡಿಯುತ್ತಿರುವ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ” ಎಂದು ಹೇಳಿದೆ.
“ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತ, ದಮನಿತರ ಪರವಾಗಿ ವೃತ್ತಿಪರತೆಯಿಂದ ದುಡಿದಂತಹ ಸಾರ್ವತ್ರಿಕವಾಗಿ ಹಿರಿಯ ಪತ್ರಕರ್ತರೊಬ್ಬರನ್ನು ಗುರುತಿಸಿ ಪ್ರತಿವರ್ಷ ಹಿರಿಯ ರಾಜಕಾರಣಿ ಬಿ ರಾಚಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ” ಎಂದು ಸಂಘವು ಹೇಳಿದೆ.
“ಪ್ರಶಸ್ತಿಯು 10.000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿರಲಿದೆ” ಎಂದು ಸಂಘ ಹೇಳಿದೆ.
ಜೊತೆಗೆ, ಪ್ರತಿವರ್ಷವೂ ಎಸ್ಸಿ/ಎಸ್ಟಿ ಸಮಯದಾಯ ಮೂವರು ಹಿರಿಯ ಸಂಪಾದಕರಿಗೆ ನೀಡಲಾಗುವ ‘ವಾರ್ಷಿಕ ಪ್ರಶಸ್ತಿ’ಗೆ ಕೋಲಾರದ ಸಿ ಮುನಿಯಪ್ಪ, ಚಿತ್ರದುರ್ಗದ ಮೈಲಾರಪ್ಪ ಮತ್ತು ಬೀದರ್ನ ಮಾಳಪ್ಪ ಅಡಸಾರೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 5000 ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ” ಎಂದು ತಿಳಿಸಿದೆ.
ಜುಲೈ ಕೊನೆ ವಾರದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘ ಹೇಳಿದೆ.




