ಅತ್ತಿಬೆಲೆ ಪಟಾಕಿ ಗೋದಾಮಿಗೆ ಬೆಂಕಿ ಅವಘಡ ಸಂಭವಿಸಿ, 16 ಮಂದಿ ಸಾವನ್ನಪ್ಪಿದ್ದ ದುರ್ಘಟನೆ ಮಾಸುವ ಮುನ್ನವೇ, ಇದೀಗ ಅಗರಬತ್ತಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಬೆಂಗಳೂರಿನ ಪೈಪ್ ಲೈನ್ ರಸ್ತೆಯ ಚೋಳರಪಾಳ್ಯದಲ್ಲಿ ನಡೆದಿದೆ.
ಬೆಂಗಳೂರಿನ ಚೋಳರಪಾಳ್ಯದಲ್ಲಿ ಮನೆಗಳಿರುವ ಪ್ರದೇಶದಲ್ಲಿ ಕಳೆದ ಐದು ವರ್ಷಗಳಿಂದ ಈ ಅಗರಬತ್ತಿ ಕಾರ್ಖಾನೆ ನಡೆಸಲಾಗುತ್ತಿದೆ. ಮನೆಯಲ್ಲಿಯೇ ಈ ಕಾರ್ಖಾನೆ ನಡೆಸಲಾಗುತ್ತಿದ್ದು, ಕೆಳ ಅಂತಸ್ತಿನ ಕೋಣೆಯಲ್ಲಿ ಅಗರಬತ್ತಿ ತಯಾರಿಕೆಗೆ ಬೇಕಾಗಿರುವ ರಾಸಾಯನಿಕ ವಸ್ತುಗಳನ್ನು ಸಂಗ್ರಹಣೆ ಮಾಡಿ ಇಡಲಾಗಿತ್ತು.
ಆಕಸ್ಮಿಕವಾಗಿ ಕಾರ್ಖಾನೆಗೆ ಬೆಂಕಿ ಹತ್ತಿದೆ. ಇದರಿಂದ ರಾಸಾಯನಿಕ ಸಂಗ್ರಹಿಸಿಟ್ಟಿದ್ದ ಬಾಕ್ಸ್ಗಳು ಏಕಾಏಕಿ ಬ್ಲಾಸ್ಟ್ ಆಗಿವೆ. ಅಲ್ಲದೇ, ರಾಸಾಯನಿಕ ರಸ್ತೆಗೆ ಹರಿದಿದೆ. ಇದರಿಂದ ಬೆಂಕಿ ಆವರಿಸಿದೆ. ಮನೆಗಳ ಮುಂದೆ ನಿಲ್ಲಿಸಿದ್ದ 8 ಬೈಕ್ಗಳಿಗೆ ಬೆಂಕಿ ವ್ಯಾಪಿಸಿದೆ. ಎಂಟು ಬೈಕ್ಗಳು ಸುಟ್ಟು ಭಸ್ಮವಾಗಿವೆ.
ಈ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ 3ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಮತ್ತು ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದುಂಬಿ-ಕೀಟಗಳ ಸಂರಕ್ಷಣೆಗಾಗಿ ‘ಕೀಟ ಕೆಫೆ’
ವಿಜಯನಗರ ಠಾಣೆಯ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಗರಬತ್ತಿ ಕಾರ್ಖಾನೆಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂದು ತನಿಖೆ ಬಳಿಕ ತಿಳಿಯಲಿದೆ.




