ದೀಪಾವಳಿಯ ಪಟಾಕಿ ಸಂಭ್ರಮ ನಗರದೆಲ್ಲೆಡೆ ಮನೆಮಾಡಿದ್ದರೂ, ಅದರ ಪರಿಣಾಮ ಅನೇಕ ಮಂದಿಯ ಬದುಕಿಗೆ ಕತ್ತಲೆ ತಂದಿದೆ. ಕಳೆದ ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಸಿಡಿಸುತ್ತಿರುವ ಪಟಾಕಿಗಳು ಇಲ್ಲಿವರೆಗೆ ಸುಮಾರು 71 ಮಂದಿ ಕಣ್ಣಿಗೆ ಗಂಭೀರ ಗಾಯ ಮಾಡಿವೆ.
ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಾದ ಮಿಂಟೋ ಹಾಗೂ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಗಾಯಾಳುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 51 ಮಂದಿಗೆ ನಾರಾಯಣ ನೇತ್ರಾಲಯದಲ್ಲಿ ಹಾಗೂ 20 ಮಂದಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಹಾರ ಮೂಲದ ಯುವ ಕಾರ್ಮಿಕನೊಬ್ಬ ಜೆಸಿ ರೋಡ್ನಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದಾಗ ಫ್ಲವರ್ ಪಾಟ್ ಪಟಾಕಿ ಸಿಡಿದು ಕಣ್ಣಿಗೆ ತೀವ್ರ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯ ಗಂಭೀರ ಸ್ವರೂಪದ್ದಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ, ಚಿಕ್ಕಬಳ್ಳಾಪುರದಿಂದ ಬಂದಿದ್ದ 5 ವರ್ಷದ ಹೆಣ್ಣು ಮಗು ಪಟಾಕಿ ಸಿಡಿಯುವ ದೃಶ್ಯ ನೋಡುತ್ತ ನಿಂತಿದ್ದಾಗ ಬಿಜಲಿ ಪಟಾಕಿಯ ಕಿಡಿ ಕಣ್ಣಿಗೆ ತಾಗಿ ಗಂಭೀರ ಗಾಯಗೊಂಡಿದೆ. ಮಗುವಿನ ಬಲ ಕಣ್ಣಿನ ಕರಿಗುಡ್ಡೆ ಸಂಪೂರ್ಣವಾಗಿ ಕರಗಿ ಹೋಗಿದ್ದು, ತುರ್ತು ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.



ವೈದ್ಯರ ಪ್ರಕಾರ, ಗಾಯಗೊಂಡವರಲ್ಲಿ ಬಹುತೇಕರು ಪಟಾಕಿ ಸಿಡಿಸುತ್ತಿದ್ದವರೇ ಅಲ್ಲ. ಬೈ ಸ್ಟ್ಯಾಂಡರ್ಡ್ಗಳು; ಅಂದರೆ ಪಕ್ಕದಲ್ಲಿ ನಿಂತಿದ್ದವರು, ಅಥವಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು. ಅಂದಾಜು 60% ರಷ್ಟು ಮಂದಿಗೆ ಬೇರೆಯವರು ಹಚ್ಚಿದ ಪಟಾಕಿಯಿಂದಲೇ ಗಾಯಗಳಾಗಿವೆ.
ಇದನ್ನೂ ಓದಿ: ಬೆಂಗಳೂರು | ಕಿರುತೆರೆ ನಟರು ಸೇರಿ 139 ಜನಕ್ಕೆ ನಿವೇಶನ ಕೊಡಿಸುವುದಾಗಿ ವಂಚನೆ
ಹಬ್ಬದ ಉತ್ಸಾಹದಲ್ಲಿ ಕೆಲವರು ಪಟಾಕಿಗಳನ್ನು ರಸ್ತೆ ಮಧ್ಯದಲ್ಲಿ ಅಥವಾ ಚಿಕ್ಕ ಗಲ್ಲಿಗಳಲ್ಲಿ ಸಿಡಿಸುವುದರಿಂದ ವಾಹನ ಸವಾರರು, ಪಾದಚಾರಿಗಳು ಗಂಭೀರ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಕೆಲವರು ಮೈಮೇಲೆ ಪಟಾಕಿ ಎಸೆದು ತಮಾಷೆ ಮಾಡುವ ಹುಚ್ಚಾಟದಿಂದ ಗಾಯಗಳು ಗಂಭೀರಗೊಂಡಿವೆ.
ಪಟಾಕಿಯ ಬೆಂಕಿ ಜ್ವಾಲೆ ಕಣ್ಣಿಗೆ ತಾಗುವುದು ಕೆಲವೇ ಕ್ಷಣಗಳ ವಿಷಯ, ಆದರೆ ದೃಷ್ಟಿ ಹಾನಿ ಶಾಶ್ವತವಾಗುವ ಸಾಧ್ಯತೆ ಇದೆ. ಪಟಾಕಿ ಸಿಡಿಸುವವರು ಮಾತ್ರವಲ್ಲ, ಪಕ್ಕದಲ್ಲಿರುವವರಿಗೂ ಸುರಕ್ಷತಾ ಕ್ರಮಗಳು ಅಗತ್ಯ ಎಂದು ವೈದ್ಯರು ಎಚ್ಚರಿಸಿದ್ದಾರೆ. ಸಂತೋಷದ ಹಬ್ಬ ಕಣ್ಣೀರಿನ ಹಬ್ಬವಾಗಬಾರದು ಎಂಬುದು ಮನವಿ. ಪಟಾಕಿ ಸಿಡಿಸುವಾಗ ದೂರವಿರುವುದು, ಮಕ್ಕಳಿಗೆ ಪಟಾಕಿ ಕೊಡುವಾಗ ವಯಸ್ಕರ ಮೇಲ್ವಿಚಾರಣೆ ಇರುವುದು ಮುಖ್ಯ ಎಂದು ಅವರು ಹೇಳಿದ್ದಾರೆ.





