- ಕ್ಷುಲ್ಲಕ ವಿಚಾರಕ್ಕೆ ಭಾನುವಾರ ರಾತ್ರಿ ನಡೆದಿದ್ದ ಗಲಾಟೆ
- ಟೋಲ್ ಶುಲ್ಕ ಪಾವತಿಯಲ್ಲಿ ವಿಳಂಬವಾದ ವಿಚಾರಕ್ಕೆ ಜಗಳ
ಟೋಲ್ ಶುಲ್ಕ ಪಾವತಿ ವೇಳೆ ವಿಳಂಬವಾದ ಕಾರಣಕ್ಕೆ ಗಲಾಟೆ ನಡೆದು ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್-ವೇಯಲ್ಲಿರುವ ಶೇಷಗಿರಿ ಟೋಲ್ ಪ್ಲಾಜಾ ಬಳಿಕ ನಡೆದಿದೆ.
ಭಾನುವಾರ ರಾತ್ರಿ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಯುವಕರ ಗುಂಪೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಷೇಶಗಿರಿ ಟೋಲ್ನಲ್ಲಿ ಯುವಕ ಕಾರು ಬಂದ ಪಥದಲ್ಲಿಯೇ ಆಟೋವೊಂದು ಟೋಲ್ ಪಾವತಿಸುತ್ತಿತ್ತು. ಆಟೋದಲ್ಲಿ ಫಾಸ್ಟಾಗ್ ಇಲ್ಲದಿದ್ದ ಕಾರಣ, ಎರಡು ಪಟ್ಟು ಹಣ ಪಾವತಿ ಮಾಡಬೇಕಿತ್ತು. ಆಟೋ ಚಾಲಕ ಟೋಲ್ ಶುಲ್ಕ ಕಟ್ಟುವುದು ತಡವಾಗಿದೆ.
ಹೀಗಾಗಿ, ಆಟೋ ಮುಂದೆ ಹೋದ ಬಳಿಕ ಟೋಲ್ ಬೂತ್ ಬಳಿ ಬಂದ ಕಾರಿನ ಯುವಕರು ಸಿಬ್ಬಂದಿ ಪವನ್ ಕುಮಾರ್ ಜೊತೆ ಗಲಾಟೆ ಮಾಡಿದ್ದು, ಟೋಲ್ ಕಟ್ಟಲು ನಿರಾಕರಿಸಿದ್ದಾರೆ. ಈ ವೇಳೆ, ಯುವಕರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸಿದ್ದಾರೆ. ಬಳಿಕ, ಸ್ಥಳೀಯರು ಮಧ್ಯ ಪ್ರವೇಶಿಸಿ ಎಲ್ಲರನ್ನೂ ಸ್ಥಳದಿಂದ ಕಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರೋಹಿಣಿ V/S ರೂಪಾ | ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ
ಆದರೆ, ಅಲ್ಲಿಂದ ಸ್ವಲ್ಪವೇ ದೂರ ಹೋಗಿದ್ದ ಯುವಕರ ಗುಂಪು ಪವನ್ ಬರುವಿಕೆಗಾಗಿ ಕಾದು ಕುಳಿತಿದೆ. ರಾತ್ರಿ 12 ಗಂಟೆ ಸುಮಾರಿಗೆ ಬಿಡುವು ಪಡೆದು ಟೂಲ್ಬೂತ್ನಿಂದ ಪವನ್ ಹೊರಬಂದಿದ್ದಾರೆ. ಆತನ ಮೇಲೆ ದುಷ್ಕರ್ಮಿ ಯುವಕರು ಹಲ್ಲೆ ಮಾಡಿದ್ದಾರೆ. ಪವನ್, ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.




