ಕನ್ನಡ ತಂತ್ರಾಂಶಗಳ ಲಿಪಿ ವಿನ್ಯಾಸದಲ್ಲಿ ವೈವಿಧ್ಯತೆ ತರುವುದು ಪ್ರಸ್ತುತಕ್ಕೆ ಅಗತ್ಯವಾಗಿದೆ. ಆಧುನಿಕ ಶೈಲಿಗೆ ಹೊಂದಿಕೊಳ್ಳದಿದ್ದರೆ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ಪ್ರಾಧಿಕಾರದಿಂದ ʼಕನ್ನಡದಲ್ಲಿ ಹೊಸ ಲಿಪಿ ವಿನ್ಯಾಸ ಅಭಿವೃದ್ಧಿʼಪಡಿಸುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
“ಹಲವಾರು ತಾಂತ್ರಿಕ ಪರಿಣಿತರು ಯುನಿಕೋಡ್ನಲ್ಲಿ ವಿವಿಧ ಮಾದರಿಯ ಕನ್ನಡ ಲಿಪಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇವೆಲ್ಲವೂ ಸಾರ್ವಜನಿಕರಿಗೆ ಲಭ್ಯವಾದಲ್ಲಿ ಕನ್ನಡ ಲಿಪಿಗಳಿಗೆ ವೈವಿಧ್ಯತೆ ದೊರಕಲಿದ್ದು, ತಂತ್ರಾಂಶದಲ್ಲಿ ಕನ್ನಡದ ಬಳಕೆ ಹೆಚ್ಚುತ್ತದೆ. ಜನಸ್ನೇಹಿ ಲಿಪಿಗಳ ವಿನ್ಯಾಸದ ಅಭಿವೃದ್ಧಿ, ತಂತ್ರಾಂಶ ವ್ಯವಸ್ಥೆಯನ್ನು ಪೋಷಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಹೊಣೆಗಾರಿಕೆಯನ್ನು ನಿರ್ವಹಿಸಲಿದೆ. ಲಿಪಿ ವಿನ್ಯಾಸ ಅಭಿವೃದ್ಧಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪರಿಣಿತರು ಪ್ರಾಧಿಕಾರದೊಂದಿಗೆ ಕೈ ಜೋಡಿಸಬಹುದಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಡಿಜಿಟಲ್ ಅರೆಸ್ಟ್ ಮೂಲಕ 89ಲಕ್ಷ ರೂ ವಂಚನೆ ಪ್ರಕರಣ, ಓರ್ವನ ಬಂಧನ
“ಮೊಬೈಲ್ ತಂತ್ರಾಂಶ, ಕ್ಲೌಡ್ ತಂತ್ರಾಂಶಗಳಲ್ಲಿಯೂ ಹೊಸ ವಿನ್ಯಾಸಗಳ ಕನ್ನಡ ಲಿಪಿಯ ಅಗತ್ಯವಿದೆ. ಕನ್ನಡದ ಕೀಲಿಮಣೆಯ ವಿನ್ಯಾಸದಲ್ಲಿಯೂ ಒಂದು ಸಮಾನತೆ ಬೇಕಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಒಂದು ಸಂಹಿತೆಯನ್ನೇ ರೂಪಿಸಬೇಕಿದೆ. ಈ ಕುರಿತಂತೆ ಸಮಿತಿಯು ಸರ್ಕಾರಕ್ಕೆ ಶೀಘ್ರವೇ ಸಮಗ್ರ ವರದಿ ಸಲ್ಲಿಸಲಿದೆ” ಎಂದು ಬಿಳಿಮಲೆ ಅವರು ಹೇಳಿದರು.
ತಾಂತ್ರಿಕ ಕ್ಷೇತ್ರದ ಪರಿಣತರಾದ ಜಿ ಎನ್ ಮೋಹನ್, ಮಧು ವೈ ಎನ್, ಮಂಜುನಾಥ ಆರ್ ಆರ್, ಎನ್ ರವಿಕುಮಾರ್ ಮತ್ತು ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಇದ್ದರು.





