ಬೆಂಗಳೂರು ನಗರದಲ್ಲಿನ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಬೆಂಗಳೂರು ಕೇಂದ್ರ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಉತ್ತಮ ರಸ್ತೆಗಳನ್ನಾಗಿಸಲು ಕ್ರಮ ವಹಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.
ಕಳೆದ 2 ದಿನದಲ್ಲಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿ/ಪ್ಯಾಚ್ ವರ್ಕ್ ಹಾಗೂ ಡಾಂಬರೀಕರಣ, ಸಿಸಿ ರಸ್ತೆ ಕಾಮಗಾರಿ ನಿರ್ವಹಿಸಿದ ರಸ್ತೆಗಳ ವಿವರ ಹೀಗಿದೆ…
ಹಲಸೂರು ಗೇಟ್ ಪೊಲೀಸ್ ಠಾಣೆ ಮುಂಭಾಗದ ರಸ್ತೆ, ಮಿಷನ್ ರಸ್ತೆ, ಕೆ.ಜಿ. ರಸ್ತೆ, ಜಯಮಹಲ್ ರಸ್ತೆ, ರಿಚ್ಮಂಡ್ ರಸ್ತೆ, ಕಾಕ್ ಬರ್ನ್ ರಸ್ತೆ, ಹೆಚ್.ಕೆ.ಪಿ. ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಅಲಿ ಆಸ್ಕರ್ ರಸ್ತೆ, ಡಿಕೆನ್ಸನ್ ರಸ್ತೆ, ಕುಮಾರ ಕೃಪ ರಸ್ತೆ, ಮೈಸೂರು ರಸ್ತೆ, ಸುಂಕೇನಹಳ್ಳಿ, ಗವಿಪುರಂ ರಸ್ತೆ, ಬಸವನಗುಡಿ ರಸ್ತೆ, ಗಾಂಧಿ ಬಜಾರ್ ಸುತ್ತಮುತ್ತಲಿನ ರಸ್ತೆ, ಜೀವನ್ ಭೀಮಾನಗರದ ಜಿ.ಎಂ. ಪಾಳ್ಯ ಸುತ್ತಮುತ್ತಲಿನ ರಸ್ತೆಗಳಿಗೆ ಕಾಂಕ್ರೀಟ್ ಹಾಕಿ ರಸ್ತೆಗಳ ಅಭಿವೃಧ್ಧಿಗೆ ಕ್ರಮ ವಹಿಸಲಾಗಿದೆ.



ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ವತಿಯಿಂದ ಹೊಂಬೇಗೌಡ ನಗರದ ಬಿಟಿಎಸ್ ಮುಖ್ಯ ರಸ್ತೆಯ ನಾರಾಯಣಸ್ವಾಮಿ ಗಾರ್ಡನ್, ಇಂದಿರಾ ಕ್ಯಾಂಟೀನ್ ಅಕ್ಕಪಕ್ಕದಲ್ಲಿ, ಶಾಂತಿನಗರ ವಿಭಾಗದಿಂದ ಬನ್ನೇರುಘಟ್ಟ ರಸ್ತೆಯ ಬೃಹತ್ ನೀರುಗಾಲುವೆಯಿಂದ ಹೊಸೂರು ಮುಖ್ಯ ರಸ್ತೆವರೆಗೆ ಎರಡೂ ಬದಿಗಳಲ್ಲಿ, ಸಿವಿ. ರಾಮನ್ ನಗರ ವಿಭಾಗದಿಂದ ಫಿಲಿಪ್ಸ್ ಮಿಲೇನಿಯಂ ನಿಂದ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ವರೆಗೆ ಎರಡು ಬದಿಗಳಲ್ಲಿ, ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ನಿಂದ ಟಿನ್ ಫ್ಯಾಕ್ಟರಿ ವರೆಗೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ.
ರಸ್ತೆಯ ಎರಡೂ ಬದಿಗಳಲ್ಲಿನ ಹಸಿ ಕಸ, ಒಣ ಕಸ, ಪ್ಲಾಸ್ಟಿಕ್, ಅನುಪಯುಕ್ತ ಸೋಫಾ, ಫರ್ನಿಚರ್ ಗಳು ಇತ್ಯಾದಿ ತ್ಯಾಜ್ಯವನ್ನು ತೆರವುಗೊಳಿಸಿ ನಗರದಲ್ಲಿ ಸ್ವಚ್ಛತೆ ಮತ್ತು ಸುಂದರೀಕರಣಕ್ಕೆ ಆದ್ಯತೆ ನೀಡಲಾಗಿದೆ.



ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು
ಪಾದಚಾರಿಗಳ ಒತ್ತುವರಿ ತೆರವು: ಸಾಮೂಹಿಕ ಸ್ವಚ್ಛತೆ ಕಾರ್ಯದ ಸಂದರ್ಭದಲ್ಲಿ ರಸ್ತೆ ಬದಿಗಳಲ್ಲಿ ಪಾದಚಾರಿಗಳ ಮೇಲೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಪೆಟ್ಟಿ ಅಂಗಡಿಗಳನ್ನು, ಇನ್ನಿತರೆ ರೀತಿಯ ಒತ್ತುವರಿಗಳನ್ನು ಸ್ಥಳೀಯ ಪೊಲೀಸರ ನೆರವಿನಿಂದ ತೆರವುಗೊಳಿಸಲಾಗಿದೆ.
ಮುಖ್ಯ ಅಭಿಯಂತರರುಗಳಾದ ಸುಗುಣ ಮತ್ತು ವಿಜಯಕುಮಾರ್ ಹರಿದಾಸ್ ರವರ ನೇತೃತ್ವದಲ್ಲಿ ನಡೆದ ಸ್ವಚ್ಛತೆ ಕಾರ್ಯದಲ್ಲಿ ಆಯಾಯ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ಯಾಂಗಮೆನ್ ಗಳು, ಮೇಸ್ತ್ರೀಗಳು, ಪೌರಕಾರ್ಮಿಕರು, ಇತರೆ ಸಿಬ್ಬಂದಿಗಳು ಮುತುವರ್ಜಿಯಿಂದ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.





