ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ನವೆಂಬರ್ 6ರಂದು ಸಾಯಂಕಾಲ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿದಿದೆ.
ಸೋಮವಾರ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹೊರವಲಯದಲ್ಲಿ ಮಳೆ ಆರಂಭವಾಗಿತ್ತು. ನಗರದಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣವಿತ್ತು. ಸಂಜೆ 4 ಗಂಟೆ ಬಳಿಕ ಈ ಮಳೆ ಹೆಚ್ಚಳವಾಯಿತು. ನಂತರದಲ್ಲಿ ಜಿಟಿ ಜಿಟಿ ಮಳೆ ಸಾಯಂಕಾಲ 7ರವರೆಗೂ ಸುರಿಯಿತು. 8:30ರ ಸುಮಾರಿಗೆ ಜೋರಾಗಿ ಆರಂಭವಾದ ಮಳೆ ಬಿಟ್ಟುಬಿಡದೆ ರಾತ್ರಿ 12 ಗಂಟೆಯವರೆಗೂ ಅಬ್ಬರಿಸಿತು. ರಾತ್ರಿ 10 ರಿಂದ 12 ರವರೆಗೆ ಧಾರಾಕಾರ ಮಳೆಯಾಗಿದೆ.
ಬೆಂಗಳೂರು ನಗರದ ಮೆಜೆಸ್ಟಿಕ್, ಶಾಂತಿನಗರ, ವಿಜಯನಗರ, ಜಯನಗರ, ರಾಜಾಜಿನಗರ, ಚಂದ್ರಾಲೇಔಟ್, ಹೆಬ್ಬಾಳ, ಸದಾಶಿವನಗರ, ಬನಶಂಕರಿ, ಜೆ.ಪಿ.ನಗರ, ಕೋರಮಂಗಲ, ಗೋವಿಂದರಾಜನಗರ, ಪ್ರಕಾಶನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಸಾಯಂಕಾಲ ಏಕಾಏಕಿ ಜೋರು ಮಳೆಯಾದ ಹಿನ್ನೆಲೆ, ಕೆಲಸ ಮುಗಿಸಿ ಮನೆಗೆ ತೆರಳುವ ನೌಕರರೆಲ್ಲರೂ ಪರದಾಡುವಂತಾಯಿತು. ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಈ ಹಿಂದೆ ಮಳೆಯಿಂದ ಅಂಡರಪಾಸ್ ತುಂಬಿ ನೀರಿನಲ್ಲಿ ಮುಳುಗಿ ಓರ್ವ ಯುವತಿ ಸಾವನ್ನಪ್ಪಿದ್ದರು. ಈ ಘಟನೆ ಬೆನ್ನಲ್ಲೇ ನಗರದಲ್ಲಿರುವ ಅಂಡರ್ಪಾಸ್ಗಳ ಸುತ್ತ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಮಳೆಯಿಂದ ಜನಜೀವನ ಅಸ್ತವ್ಯಸ್ತ
ಮತ್ತಿಕೆರೆ, ಯಶವಂತಪುರ, ದಾಸರಹಳ್ಳಿ, ಯಲಹಂಕ, ಬೇಗೂರು, ಕೋರಮಂಗಲ, ಚಂದ್ರಾಲೇಔಟ್, ನಾಯಂಡಹಳ್ಳಿ, ಜಯನಗರ, ಸುಂಕದಕಟ್ಟೆ ಭಾಗದಲ್ಲಿ ಜೋರು ಮಳೆಯಾಗಿದೆ. ಈ ರಸ್ತೆಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದವು. ನಗರದಲ್ಲಿರುವ ರಾಜಕಾಲುವೆಗಳು ನೀರು ತುಂಬಿ ಹರಿಯಿತು.
ಶ್ರೀರಾಂಪುರ ಅಂಡರ್ ಪಾಸ್ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಕಂಟೋನ್ಮೆಂಟ್ – ವಸಂತಗರದ ಕೆಳಸೇತುವೆ, ಜೆ.ಸಿ. ನಗರದ ದೂರದರ್ಶನ ಕೇಂದ್ರದ ಆಸುಪಾಸಿನ ವೃತ್ತಗಳೂ ಜಲಾವೃತವಾಗಿದ್ದವು. ಜಾಲಹಳ್ಳಿ ಜಂಕ್ಷನ್ ಮೆಟ್ರೊ ನಿಲ್ದಾಣದ ಕೆಳಗೆ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು ಪರದಾಡಿದರು.
ಬಾಣಸವಾಡಿ ಬಳಿಯ ಲಿಂಗರಾಜಪುರಂ ಫ್ಲೈ ಓವರ್ ಕೆಳಗಿನ ಅಂಡರ್ ಪಾಸ್ ಜಲಾವೃತಗೊಂಡಿತು. ಫ್ರೆಜರ್ ಟೌನ್ನಿಂದ ಹೆಣ್ಣೂರು ಮುಖ್ಯರಸ್ತೆಯಲ್ಲಿ ಬರುವ ಮೇಲ್ಸೇತುವೆ ಇದಾಗಿದ್ದು, ಅಂಡರ್ ಪಾಸ್ ಜಲಾವೃತ ಆದ ಹಿನ್ನೆಲೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
C V Raman Nagar Kaggadasapura Road pic.twitter.com/p4JCwEqv31
— R Prasad (@prasad_abc) November 7, 2023
ಕುರುಬರಹಳ್ಳಿಯಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿತು. ದಿನಸಿ ಸಾಮಗ್ರಿಗಳು, ಹಾಸಿಗೆ , ಬಟ್ಟೆ ಮಳೆಯ ನೀರಿಗೆ ತೊಯ್ದು ಹೋದವು. ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರಿನಲ್ಲಿ ಸೋಮವಾರ ಸುರಿದ ಮಳೆಯಿಂದ ಶಿರಸಿ ಮೇಲ್ಸೇತುವೆ ಮತ್ತು ಸುಲ್ತಾನ್ ರಸ್ತೆಯಲ್ಲಿ ನಿಂತ ನೀರಿನಲ್ಲೇ ವಾಹನಗಳು ಸಾಗಿದವು.
ಗೊರಗುಂಟೆಪಾಳ್ಯದ ಪೈಪ್ಲೈನ್ ರಸ್ತೆಗಳಲ್ಲಿ ವಾಹನಗಳು ಮುಳುಗುವಷ್ಟು ಮಳೆನೀರು ತುಂಬಿಕೊಂಡಿತ್ತು. ನಗರದ ನಾನಾ ಭಾಗಗಳಲ್ಲಿರುವ ಅಂಡರ್ಪಾಸ್ಗಳು ಜಲಾವೃತವಾಗಿದ್ದವು.
ಎಲ್ಲೆಲ್ಲಿ ಎಷ್ಟು ಮಳೆ?
ಜಕ್ಕೂರು 28 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 18 ಮಿ.ಮೀ, ಹೆರೋಹಳ್ಳಿ 20 ಮಿ.ಮೀ, ಕುಶಲ್ನಗರ 25 ಮಿ.ಮೀ, ಬಾಣಸವಾಡಿ 30 ಮಿ.ಮೀ, ಕಮ್ಮನಹಳ್ಳಿ 32 ಮಿ.ಮೀ, ಆರ್.ಆರ್.ನಗರ 36ಮಿ.ಮೀ, ಉತ್ತರಹಳ್ಳಿ 20 ಮಿ.ಮೀ ಮಳೆಯಾಗಿದೆ.
ಕರ್ನಾಟಕದ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಕರ್ನಾಟಕದ 6 ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ, ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ಬೆಂಗಳೂರಿನಲ್ಲಿ ನವೆಂಬರ್ 7 ಮತ್ತು 8 ರಂದು ಧಾರಾಕಾರ ಮಳೆಬೀಳುವ ಸಾಧ್ಯತೆ ಇದೆ. ಈ ಎರಡೂ ದಿನ ಸಂಪೂರ್ಣ ಮೋಡ ಕವಿದ ವಾತಾವರಣವಿರಲಿದೆ. ಗುಡುಗು ಸಿಡಿಲು ಸಹಿತ ರಾತ್ರಿ ವೇಳೆ ಧಾರಾಕಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತರಕಾರಿಗಳಲ್ಲಿ ಭಾರ ಲೋಹಗಳ ಅಂಶ ಪತ್ತೆ; ಸರ್ಕಾರದ ನಿಷ್ಕಾಳಜಿ ದುರದೃಷ್ಟಕರ ಎಂದ ಕೆಆರ್ಎಸ್
ಬಿಬಿಎಂಪಿ ವಾರ್ ರೂಮ್ಗೆ ಡಿಸಿಎಂ ಭೇಟಿ
ಬೆಂಗಳೂರಿನ ವಿವಿಧೆಡೆ ನ.6ರಂದು ರಾತ್ರಿ ಹಲವು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ತಡರಾತ್ರಿ ಬಿಬಿಎಂಪಿಯ ವಾರ್ ರೂಂಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭೇಟಿ ನೀಡಿದರು. ಮಳೆಯಿಂದಾಗಿ ನಗರದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ, ವಾರ್ ರೂಮ್ ಗೆ ಬಂದ ಕರೆ ಸ್ವೀಕರಿಸಿ ಮಾತನಾಡಿದರು.
ಬಿಬಿಎಂಪಿ ಕೇಂದ್ರ ಕಚೇರಿಯ ಕಂಟ್ರೋಲ್ ರೂಂ, ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ಗಳಿಗೆ ಭೇಟಿ ನೀಡಿ ಮಳೆಯಿಂದ ಉಂಟಾದ ಅನಾಹುತಗಳ ಪರಿವೀಕ್ಷಣೆ ಮಾಡಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು, ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದರು.
ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, “ಮುಂಗಾರು ಮಳೆ ಕೈಕೊಟ್ಟಿದೆ. ಈಗಲಾದರೂ ಚೆನ್ನಾಗಿ ಮಳೆ ಬರಲಿ. ಆದರೆ, ಮಳೆಯಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು. ಬಿಬಿಎಂಪಿಯ ಎಲ್ಲ ವಲಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಈಗಾಗಲೇ ಹಲವಾರು ದೂರುಗಳು ಬಂದಿದೆ. ತಕ್ಷಣವೇ ಅಧಿಕಾರಿಗಳಿಗೆ ತೆರಳುವಂತೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.




