ರಾಜಕೀಯ ನಾಯಕರನ್ನು ಹೀರೋಗಳನ್ನಾಗಿ ಭಕ್ತಿ ತೋರಿಸಬೇಡಿ. ಇದು ಸಂವಿಧಾನಕ್ಕೆ ಸವಾಲು ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್ಎಜೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕ್ಲಿಪ್ಟನ್ ಡಿ’ ರೊಜಾರಿಯೋ ಹೇಳಿದರು.
ಅವರು (ಎಐಎಲ್ಎಜೆ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಬಿ ಸಿ ರೋಡಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನದ ಮುಂದಿರುವ ಸವಾಲುಗಳು’ ಎಂಬ ವಿಚಾರವಾಗಿ ಮಾತನಾಡಿದರು.
ಇಂದು ರಾಜಕೀಯ ನಾಯಕರನ್ನು ಹೀರೋಗಳನ್ನಾಗಿ ಭಾರೀ ಭಕ್ತಿಯಿಂದ ನೋಡುತ್ತಿರುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಭಕ್ತರಾಗಿಬಿಟ್ಟರೆ ಪ್ರಭುತ್ವವನ್ನು ಪ್ರಶ್ನೆ ಮಾಡೋದು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಈ ಅಪಾಯವನ್ನು 1974ರಲ್ಲಿಯೇ ಹೇಳಿದ್ದರು. ಇದನ್ನು ನಾವು ಭಾರತ ಸಂವಿಧಾನದ ಭಾರೀ ಅಪಾಯವಾಗಿ ಕಾಣಬೇಕು ಎಂದು ಹೇಳಿದರು.
ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಪ್ರಜಾಪ್ರಭುತ್ವದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಬಡತನ ಸಂವಿಧಾನದ ಆಶಯಗಳನ್ನು ಸಾಧಿಸಲು ಅಡ್ಡಿಯಾಗುತ್ತಿದೆ. ಬಡವರಿಗೆ ಇಂದು ಒಬ್ಬ ನಾಗರಿಕನಾಗಿ ಚಿಂತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಂವಿಧಾನದ ಆಶಯವನ್ನು ಮನದಟ್ಟು ಮಾಡಿಕೊಳ್ಳಲು ಕೂಡಾ ಸಾಧ್ಯವಿಲ್ಲ. “ಇಂದು ಯುವಕರು ಧರ್ಮದ ಗೋಡೆಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ಇದನ್ನು ಒಡೆಯಬೇಕಾಗಿದೆ. ಈ ಮೂಲಕ ನಾವು ಸಂವಿಧಾನಕ್ಕೆ ಪೂರಕವಾಗಿ ಬದುಕಬಹುದು” ಎಂದರು.
“ಸಂವಿಧಾನವನ್ನು ಎಲ್ಲರೂ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿಯ ಶಿಕ್ಷಣ ನಮ್ಮ ಸಮಾಜದಲ್ಲಿ ಬೇಕಾಗಿದೆ. ಸಮಾಜದಲ್ಲಿ ಬಡವ-ಶ್ರೀಮಂತ ಎಂಬ ಭೇದ-ಭಾವ, ಜಾತಿ ಶೋಷಣೆ, ಧರ್ಮ-ಲಿಂಗ ತಾರತಮ್ಯ ಇಲ್ಲದ ಸಮಾಜ ಇಂದು ನಿರ್ಮಾಣವಾಗಬೇಕಿದೆ. ಇದು ಇಂದಿನ ಹಿರಿಯರು ಮುಂದಿನ ಸಮಾಜಕ್ಕೆ ನೀಡಬಹುದಾದ ಕೊಡುಗೆ” ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ಬಂಟ್ವಾಳ | ಸರ್ಕಾರಿ ಸೇರಿ ಹಲವು ಶಾಲೆಗಳಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ
“ದೇಶದ ಪ್ರಜಾಪ್ರಭುತ್ವ ಇಂದಿರಾ ಗಾಂಧಿ ಆಡಳಿತದಲ್ಲಿ ‘ತುರ್ತು ಪರಿಸ್ಥಿತಿ’ ಎಂಬ ಅತ್ಯಂತ ಕರಾಳ ದಿನಗಳನ್ನು ಎದುರಿಸಿತ್ತು. ಆ ಸಂದರ್ಭ ಸಂವಿಧಾನದಲ್ಲಿ ಬದಲಾವಣೆ ತರಲು ಇಂದಿರಾ ಗಾಂಧಿ ಪ್ರಯತ್ನ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟಾಗುವ ತಿದ್ದುಪಡಿ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಹೀಗಾಗಿ ಸಂವಿಧಾನ ಬದುಕಿ ಉಳಿದಿದೆ” ಎಂದರು.
ಹಿರಿಯ ವಕೀಲ ಮನೋರಾಜ್ ಹಾಗೂ ಎಐಎಲ್ಎಜೆ ಕೇಂದ್ರ ಸಮಿತಿಯ ಅವನಿ ಮಾತನಾಡಿದರು. ಜಿಲ್ಲಾಧ್ಯಕ್ಷ ತುಳಸಿದಾಸ್, ಹೈ ಕೋರ್ಟ್ ವಕೀಲೆ ಸಂಧ್ಯಾ ಪ್ರಭು, ಹಾಸನದ ವಕೀಲ ಮಹೇಶ್, ಬಂಟ್ವಾಳದ ವಕೀಲ ಶ್ರೀಧರ್ ಪೈ ಮೊದಲಾದವರು ಮಾತನಾಡಿದರು.





