ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕಡೇಶಿವಾಲಯ ಗ್ರಾಮದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ-ಗಡಿಯಾರದ ಕ್ಯಾಂಪಸ್ನಲ್ಲಿ ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ಗಳಡಿ ಬರುವ 30ಕ್ಕೂ ಹೆಚ್ಚು ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಸಮೂಹ ಮತ್ತು ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ ಸಹಭಾಗಿತ್ವದಲ್ಲಿ, ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪಡೆದು ಕೆದಿಲ ಕ್ಲಸ್ಟರ್ ಮಟ್ಟದ ಚಾಂಪಿಯನ್, ಪ್ರಥಮ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮಲ್ಲಡ್ಕ ತನ್ನದಾಗಿಸಿಕೊಂಡಿತು. ಒಟ್ಟು ಐದು ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕೆದಿಲ ದ್ವಿತೀಯ ಸ್ಥಾನವನ್ನು ಗಳಿಸಿತು ಹಾಗೂ ದ.ಕ. ಹಿರಿಯ ಪ್ರಾಥಮಿಕ ಶಾಲೆ, ಪಾಟ್ರಕೋಡಿ ನಾಲ್ಕು ಪ್ರಶಸ್ತಿಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆಯಿತು.






ಕಡೇಶಿವಾಲಯ ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಉನ್ನತೀಕರಿಸಿದ ಶಾಲೆ ಕಡೇಶಿವಾಲಯ ಇವರು ಒಟ್ಟು ಹದಿನೈದು ಪ್ರಶಸ್ತಿಗಳಿಗೆ ಭಾಜನರಾಗಿ ಪ್ರಥಮ ಸ್ಥಾನ ಪಡೆದುಕೊಂಡರು. ಹತ್ತು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ, ದ.ಕ. ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು ಪಲ್ಕೆರವರು ದ್ವಿತೀಯ ಸ್ಥಾನಿಯಾಗಿ ಮಿಂಚಿದರು ಹಾಗೂ ಉಳಿದ ಐದು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇರಾ ತೃತೀಯ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಅಲ್ಲದೆ, ಚಿತ್ರಕಲಾ, ಕವನ ವಾಚನ ಹಾಗೂ ಮಿಮಿಕ್ರಿ ಸ್ಪರ್ಧೆಗಳಲ್ಲಿ ಕ್ರಮವಾಗಿ ಪ್ರಥಮ ಸ್ಥಾನವನ್ನು ಪಡೆದ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಇಲ್ಲಿನ ಮೂವರು ವಿದ್ಯಾರ್ಥಿಗಳಾದ, ಏಳನೇ ತರಗತಿಯ ಅನ್ಸಾಮ್ ಹಾಗೂ ನಿಷ್ಫಾ ಮತ್ತು ಆರನೇ ತರಗತಿಯ ಝಿಯಾನ್ ಮುಂದಿನ ಸುತ್ತಿನ ತಾಲೂಕು ಮಟ್ಟದಲ್ಲಿನ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದರು. ವಿಜೇತರೆಲ್ಲರಿಗೂ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ: ಬಂಟ್ವಾಳ | ಎಸ್ಐಒದಿಂದ ಕೋಟೆಕಣಿ ಸರ್ಕಾರಿ ಶಾಲೆಗೆ 20 ಜೊತೆ ಬೆಂಚು ಡೆಸ್ಕುಗಳ ಕೊಡುಗೆ
ಪರಿಸರ ಜಾಗೃತಿ ಸಂದೇಶ ಸಾರುವ ಸಲುವಾಗಿ ಸಸಿಗೆ ನೀರೆರೆಯುವ ಮೂಲಕ ಕಡೇಶಿವಾಲಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡದರು. ಬಳಿಕ ಶಿಕ್ಷಣ ಇಲಾಖೆಯ ಸುಧಾಕರ್ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಮಿನಾ ಬಾನು ಸ್ವಾಗತಿಸಿ, ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಅಧ್ಯಕ್ಷೀಯ ಭಾಷಣ ಮಾಡಿದರು. ಶಿಕ್ಷಕಿ ನಿಖಿತಾ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಹೈದರ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕಡೇಶಿವಾಲಯ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸುರೇಶ್ ಪೂಜಾರಿ ಕನ್ನೋಟ್, ನಗರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಸತೀಶ್ ರಾವ್, ಬಂಟ್ವಾಳದ ಶಿಕ್ಷಕ ಸಂಘದ ಅಧ್ಯಕ್ಷ ಗುರುರಾಜ್ ಪಾಟ್ರಕೋಡಿ, ವಿಸ್ಡಮ್ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ರಾಜೇಶ್ವರಿ, ಪ್ರಧಾನ ಕಾರ್ಯದರ್ಶಿ ಜನಾಬ್ ಝಕರಿಯಾ, ಜುಮಾ ಮಸೀದಿ ಗಡಿಯಾರದ ಅಧ್ಯಕ್ಷ ಜನಾಬ್ ರಿಯಾಝ್ ಕಲ್ಲಾಜೆ, ಹಾಜಿ ಇಸ್ಮಾಯಿಲ್ ಕಲ್ಲಾಜೆ, ಜನಾಬ್ ಅಲ್ತಾಫ್ ದಾರಿಮಿ ಖತೀಬರು, ಹಯಾತುಲ್ ಇಸ್ಲಾಮ್ ಜುಮಾ ಮಸೀದಿ ಪೆರ್ಲಾಪು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.





