ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಎಸ್ಐಒ ಕರ್ನಾಟಕ ಎರಡು ಕಂಪ್ಯೂಟರ್ಗಳನ್ನು ಕೊಡುಗೆ ನೀಡಿದೆ.
ಶಿಕ್ಷಕರ ದಿನಾಚರಣೆಯ ಹಿನ್ನೆಲೆ ʼಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕʼ ಅಭಿಯಾನದ ಭಾಗವಾಗಿ ಎಲ್ಲ ಶಾಲೆಗಳಿಗೆ ಎಸ್ಐಒ ಪದಾಧಿಕಾರಿಗಳು ತೆರಳಿ, ಉಡುಗೊರೆ ನೀಡಿ ಶಿಕ್ಷಕರನ್ನು ಗೌರವಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದರು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಆದಮ್ ಅವರನ್ನು ಗೌರವಿಸಲು ತೆರಳಿದ್ದ ವೇಳೆ ʼAI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಿದ್ದು, ನಮ್ಮಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯುವಂತಾಗಲು ಸಂಘಟನೆ ವತಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುವಂತೆʼ ಬೇಡಿಕೆ ಇಟ್ಟಿದ್ದರು. ಇದನ್ನು ಮನಗಂಡ ಎಸ್ಐಒ ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ದಾನಿಗಳನ್ನು ಭೇಟಿಯಾಗಿ ಶಾಲೆಗೆ ಎರೆಡು ಕಂಪ್ಯೂಟರ್ ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಆದಮ್ ಅವರು ಮಾತನಾಡಿ, “ತಾನು ಕಲಿಸದಿದ್ದರೂ ಶಿಕ್ಷಣ ನೀಡುವ ಎಲ್ಲಾ ಶಿಕ್ಷಕರನ್ನು ಗೌರವಿಸುವ ಗುಣ ನನ್ನ ಜೀವನದಲ್ಲಿ ಇದುವರೆಗೂ ಅನುಭವ ಆಗಿಲ್ಲ. ಹಲವಾರು ದಾನಿಗಳನ್ನು ಭೇಟಿಯಾಗಿ ಒಂದೂವರೆ ತಿಂಗಳೊಳಗೆ ತಾನಿಟ್ಟ ಬೇಡಿಕೆಯನ್ನು ಈಡೇರಿಸಿದ್ದೀರಿ. ಒಂದು ಸಂಘಟನೆಯಲ್ಲಿ ಸೇರಿ ಸಮಾಜಕ್ಕೆ ಪ್ರಯೋಜನವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಅದರಲ್ಲೂ ವಿದ್ಯಾರ್ಥಿ ಸಂಘಟನೆಯಾಗಿ ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಯಾರಿಗೂ ಸಿಗುವುದಿಲ್ಲ. ದೇವನ ಅನುಗ್ರಹ ಸದಾ ಇರಲಿ” ಎಂದು ಆಶಿಸಿದರು.
ಮುಖ್ಯೋಪಾಧ್ಯಾಯಿನಿ ವಿನೋಲ ಸಿವಿಲ್ಯ ಪಿಂಟೊ ಮಾತನಾಡಿ, “ದೇಶದ ಹಿತಕ್ಕಾಗಿ, ನಾಡಿನ ಉದ್ಧಾರಕ್ಕಾಗಿ ವಿದ್ಯಾರ್ಥಿಗಳು, ಯುವಕರು ಇಂತಹ ಗುಣಗಳನ್ನು ಮೈಗೂಡಿಕೊಳ್ಳಬೇಕು. ಮಕ್ಕಳು ಸಮಾಜವನ್ನು ಅರ್ಥಮಾಡಿಕೊಂಡು ಒಳ್ಳೆಯ ದಾರಿಯಲ್ಲಿ ನಡೆಯಬೇಕು” ಎಂದರು.
ಎಸ್ ಐ ಒ ಪಾಣೆಮಂಗಳೂರು ಘಟಕದ ಅಧ್ಯಕ್ಷ ಮುಬಾರಿಶ್ ಸಿ ಮಾತನಾಡಿ, “ವಿದ್ಯಾರ್ಥಿಗಳು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ, ಪ್ರೀತಿಯನ್ನು ಹಂಚುವ ಮೂಲಕ ದೇಶ ಸೇವೆಯನ್ನು ಮಾಡಬೇಕು. ಯಾವುದೇ ಧರ್ಮ ಮನುಷ್ಯರನ್ನು ಪ್ರೀತಿಸಲು ಹೇಳಿದೆಯೇ ಹೊರತು ದ್ವೇಷಿಸಲು ತಿಳಿಸಿಲ್ಲ. ಸರ್ವೇ ಜನ ಸುಖಿನೋ ಭವಂತು ಇದರಲ್ಲಿ ಎಲ್ಲಾ ಮಾನವ ಸಮೂಹಕ್ಕೆ ಸುಖದ ಪ್ರಾರ್ಥನೆ ಇದೆ ಹೊರತು ಅದರಲ್ಲಿ ಬೇರೆ ಬೇರೆ ಧರ್ಮ/ಜಾತಿಗಳನ್ನು ಹೆಸರನ್ನು ಸೂಚಿಸಿಲ್ಲ. ವಿದ್ಯಾರ್ಥಿಗಳು ವಿದ್ಯೆಯನ್ನು ಕೇವಲ ಅಂಕಗಳಿಗೋಸ್ಕರ ಮಾತ್ರ ಪಡೆಯದೇ ಉತ್ತಮ ಶಿಕ್ಷಣ ಪಡೆದು ಶಾಂತಿಯ ಸಹನೆಯ ಪ್ರೀತಿ ವಿಶ್ವಾಸದ ದೇಶ ಕಟ್ಟುವಂತಾಗಬೇಕೆಂದರು. ತಮ್ಮ ಸಂಘಟನೆ ವತಿಯಿಂದ ಮಾಡಿದ ಇಂತಹ ಸೇವೆಗಳಿಗೆ ಪುಣ್ಯ ಸಿಗುವಂತಾಗಲು ತಾವೆಲ್ಲರೂ ತಮ್ಮ ಪ್ರಾರ್ಥನೆಯಲ್ಲಿ ಸೇರಿಸಬೇಕು” ಎಂದು ವಿನಂತಿಸಿದರು.
ಇದನ್ನೂ ಓದಿ: ಮಂಗಳೂರು | ಕೊರಗರ ಮೂಲದ ಮಹತ್ವದ ಅಂಶ ಪತ್ತೆ: ಕುಲಪತಿ ಪ್ರೊ. ಪಿ ಎಲ್ ಧರ್ಮ ಮಾಹಿತಿ
SDMC ಅಧ್ಯಕ್ಷ ಪುರುಷೋತ್ತಮ ಬಿ, “ಸಂಘ ಸಂಸ್ಥೆಗಳನ್ನು ಕಟ್ಟುವುದು ದೊಡ್ಡ ವಿಷಯವಲ್ಲ. ಆದರೆ ,ಅವುಗಳನ್ನು ನಡೆಸಿಕೊಂಡು ಹೋಗುವುದು ಕಷ್ಟ. ನಿಮ್ಮನ್ನು ನೋಡಲು ತುಂಬಾ ಖುಷಿಯಾಗುತ್ತದೆ ಹಾಗೂ ಹೆಮ್ಮೆ ಅನಿಸುತ್ತದೆ. ಬ್ಯಾಟ್ ಹಿಡಿದುಕೊಂಡು ಆಡುವ ಈ ಸಮಯದಲ್ಲಿ ಒಂದು ಮೂಲೆಯಲ್ಲಿರುವ ಸರಪಾಡಿ ಶಾಲೆಗೆ ಬಂದು ಹಾಗೂ ಇನ್ನಿತರ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳ ತೊಂದರೆಗಳಿಗೆ ಸ್ಪಂದಿಸುವಂತಹಾ ಇಂತಹ ಮನಸ್ಸು ಭಗವಂತ ಎಲ್ಲರಿಗೂ ನೀಡುವುದಿಲ್ಲ. ತಾವುಗಳು ಪುಣ್ಯವಂತರು. ಇಂತಹ ಜನ ಸ್ನೇಹಿ ಕಾರ್ಯಗಳಿಂದ ನೀವು ಎಂತಹ ಜನರು ಎಂದು ತಿಳಿಯುತ್ತದೆ. ಒಂದು ಒಳ್ಳೆಯ ಬೀಜ ಬಿತ್ತಿದರೆ ಮಾತ್ರ ಒಳ್ಳೆಯ ಫಸಲು ಸಿಗಲು ಸಾದ್ಯ. ಅಂದ್ಹಾಗೆ ಇದರಿಂದ ನಿಮ್ಮ ಹೆತ್ತವರು ನಿಮಗೆ ಹೇಗೆ ಜೀವನ ನಡೆಸಬೇಕೆಂದು ಕಲಿಸಿಕೊಟ್ಟಿರುತ್ತಾರೆ ಎಂದು ತಿಳಿಯುತ್ತದೆ. ನಮ್ಮ ವಿದ್ಯಾರ್ಥಿಗಳ ಯಶಸ್ವಿನ ಹಿಂದೆ ನಿಮ್ಮ ಈ ತ್ಯಾಗ ಸದಾ ಜೀವಂತ ಇರುತ್ತದೆ. ಸರಪಾಡಿ ಎಂಬುದು ದೈವಿಕಶಕ್ತಿಯುಳ್ಳ ಪ್ರದೇಶವಾಗಿದೆ ನಿಮ್ಮ ಇಂತಹ ಸೇವೆಗೆ ಭಗವಂತನ ಮೆಚ್ಚುಗೆ ಇರುತ್ತದೆ. ಅವನು ಖಂಡಿತ ನಿಮ್ಮ ಕೈ ಬಿಡಲಿಕ್ಕಿಲ್ಲ” ಎಂದು ಶುಭ ಹಾರೈಸಿದರು .
ಕಾರ್ಯಕ್ರಮದಲ್ಲಿ ಎಸ್ಐಒ ಜಿಲ್ಲಾಧ್ಯಕ್ಷ ಬ್ರ. ರಿಜ್ವಾನ್, ಎಸ್ಐಒ ಪಾಣೆಮಂಗಳೂರು ಘಟಕದ ಸದಸ್ಯ ಬ್ರ ಇಸ್ಮಾಯಿಲ್, ಬ್ರ. ಮುತಹರ್, ಬ್ರ. ಅಫ್ಸಾನ್, ಶಾಲೆಯ ಶಿಕ್ಷಕಿ ಕಿಶೋರಿ ಹಾಗೂ ಹಲವಾರು ಮಕ್ಕಳು ಉಪಸ್ಥಿತರಿದ್ದರು.





