ದಿನೇ ದಿನೇ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಹೀಗಾಗಿ, ಅತ್ಯಾಧುನಿಕ ಕಾಲದಲ್ಲೂ ರಕ್ತ ನೀಡುವ ಬಗ್ಗೆ ಜನಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ದೇರಳಕಟ್ಟೆಯ ಕ್ಷೇಮ ಅಕಾಡೆಮಿಯ ಪೆಥೋಲಜಿ ವಿಭಾಗದ ವೈದ್ಯರಾದ ಡಾ. ಮಂಜುಶ್ರೀ ಅಭಿಪ್ರಾಯಿಸಿದರು.
ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಾಜೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛ ಕಾರಾಜೆ ಸಮಿತಿಯು ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ಯುವ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಕ್ತದಾನದ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಯಾಕೆಂದರೆ ಯಾವುದೇ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗೂ ಕೂಡ ರಕ್ತ ಬೇಕಿರುತ್ತದೆ. ಆದರೆ, ರಕ್ತ ಕೊಡುವುದಕ್ಕೆ ಹಲವರು ಹಿಂಜರಿಯುತ್ತಾರ. ಇದರಿಂದಾಗಿ ಬೇಡಿಕೆ ಹಾಗೂ ಪೂರೈಕೆಯ ನಡುವೆ ತುಂಬಾ ಅಂತರ ಉಂಟಾಗುತ್ತಿದೆ. ಈ ಅಂತರವನ್ನು ಕಡಿಮೆ ಮಾಡಬೇಕಾದರೆ ರಕ್ತದಾನದಿಂದ ಮಾತ್ರ ಸಾಧ್ಯವಿದೆ ಎಂದು ತಿಳಿಸಿದರು.

ಆರೋಗ್ಯವಂತ ಪುರುಷರು ಪ್ರತೀ ಮೂರು ತಿಂಗಳಿಗೊಮ್ಮೆ ಹಾಗೂ ಆರೋಗ್ಯವಂತ ಮಹಿಳೆಯರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಕೂಡ ಹಲವಾರು ಧನಾತ್ಮಕ ಬದಲಾವಣೆಗಳು ಆಗುತ್ತವೆ. ಹಾಗಾಗಿ, ರಕ್ತದಾನ ಮಾಡುವುದಕ್ಕೆ ಯಾರೂ ಕೂಡ ಹಿಂಜರಿಯಬಾರದು ಎಂದು ಡಾ. ಮಂಜುಶ್ರೀ ಕಿವಿಮಾತು ಹೇಳಿದರು.
ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರಾದ ದಿನೇಶ್ ನಾಯಕ್ ಮಾತನಾಡುತ್ತಾ, “ಇಂದಿನ ಯುಗದಲ್ಲಿ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೂಡ ರಕ್ತವನ್ನು ಉತ್ಪಾದಿಸಲು ಯಾವ ವಿಜ್ಞಾನಿಗೂ ಆಗಿಲ್ಲ ಎಂಬುದು ವಾಸ್ತವ. ರಕ್ತದಾನ ಒಬ್ಬ ಮನುಷ್ಯನ ಹೃದಯದಿಂದ ಬಂದಲ್ಲಿ ಮಾತ್ರ ಅದು ಸಾರ್ಥಕವಾಗುತ್ತದೆ. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದ್ದರೆ ಮಾತ್ರ ಓರ್ವ ಮನುಷ್ಯ ರಕ್ತ ನೀಡಲು ಮುಂದೆ ಬರುತ್ತಾನೆ. ನಾವು ಬದುಕಿರುವಾಗಲೇ ಮತ್ತೊಬ್ಬರ ಜೀವ ಉಳಿಸಬಹುದಾಗಿದೆ. ಇಂದು ಇಲ್ಲಿ ರಕ್ತದಾನ ಮಾಡಲು ಬಂದ ಎಲ್ಲ ಸಹೃದಯಿಗಳು ನಿಜವಾದ ಹೀರೋಗಳು” ಎಂದು ತಿಳಿಸಿದರು.
ಸ್ವಚ್ಛ ಕಾರಾಜೆ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವಾಧ್ಯಕ್ಷರಾದ ಉಮರಾಕ ಅಧ್ಯಕ್ಷೀಯ ಭಾಷಣಗೈದರು. ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ನ ಮುಖಂಡರಾದ ಶೌಕತ್ ಇಂದಬೆಟ್ಟು ಶಿಬಿರದಲ್ಲಿ ತಮ್ಮ ಸೇವೆಯನ್ನು ಜನರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರಾಜೆಯ ಯುವ ವೈದ್ಯರಾದ ಡಾ. ಮುಹಮ್ಮದ್ ಉನೈಸ್ ಹಾಗೂ ಡಾ. ಕೀರ್ತನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸ್ವಚ್ಛ ಕಾರಾಜೆ ಸಮಿತಿಯ ಜೊತೆ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಅಭಿನಂದನಾ ಪತ್ರ ವಾಚಿಸಿದರು. ಶಿಬಿರದಲ್ಲಿ 48 ಮಂದಿ ರಕ್ತದಾನಿಗಳು ರಕ್ತ ನೀಡುವ ಮೂಲಕ ಸಹಕರಿಸಿದರು. ವೇದಿಕೆಯಲ್ಲಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಅಬ್ದುಲ್ ಕರೀಂ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಫೌಝಿಯಾ, ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸ್ವಚ್ಛ ಕಾರಾಜೆ ಸಮಿತಿಯ ಉಪಾಧ್ಯಕ್ಷರಾದ ಅಬ್ಬಾಸ್, ಕಾರ್ಯದರ್ಶಿ ತಮೀಝ್ ಅಲಿ ಕಾರಾಜೆ, ಜೊತೆ ಕಾರ್ಯದರ್ಶಿ ಮೊಹಮ್ಮದ್ ಸಮೀರ್, ಕೋಶಾಧಿಕಾರಿ ಮೊಹಮ್ಮದ್ ಜುಬೇರ್, ಲೆಕ್ಕಪರಿಶೋಧಕ ಅಬ್ದುಲ್ ಜಲೀಲ್, ಸಂಘಟಕರಾದ ಮೊಹಮ್ಮದ್ ಹಾರಿಸ್, ಹಮೀದ್, ಫಝುಲ್ ಕಾರಾಜೆ, ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ನ ಪದಾಧಿಕಾರಿಗಳಾದ ಮೊಹಮ್ಮದ್ ರಫೀಕ್ ತುಂಬೆ. ಅಲ್ತಾಫ್ ಟಿಪ್ಪುನಗರ, ಇಬ್ರಾಹೀಂ ನಂದಾವರ ಸೇರಿದಂತೆ ಊರಿನ ಗಣ್ಯರು ಉಪಸ್ಥಿತರಿದ್ದರು.








