“ಕಾವಿ ಧರಿಸಿದ ಮಠಾಧೀಶರು ಬಸವ ತಾಲಿಬಾನಿಗಳು” ಎಂದು ಹೇಳುವ ಮೂಲಕ ಕೊಲ್ಲಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
ಈಗಾಗಲೇ ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣ ವಿಜಯಪುರ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೊಂದಿರುವ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿಯ ರಾಯಬಾಗ ಪಟ್ಟಣದಲ್ಲಿ ಭಜರಂಗದಳ ಆಯೋಜಿಸಿದ್ದ ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿ “ಕಾವಿ ಧರಿಸಿದ ಮಠಾಧೀಶರು ಬಸವ ತಾಲಿಬಾನಿಗಳು” ಎಂದಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರಕ್ಕೆ ಪ್ರವೇಶ ನಿರ್ಬಂಧ ಆದೇಶ; ಕಾಡಸಿದ್ದೇಶ್ವರ ಸ್ವಾಮೀಜಿಯ ಅರ್ಜಿ ವಜಾ
ಮಾಲಾಧಾರಿಗಳ ಬಗ್ಗೆ ಮಾತನಾಡುತ್ತಾ, “ಈ ಮಾಲೆ ಪೊಲೀಸ್ ಇದ್ದಂತೆ ನಮ್ಮನ್ನು ಕೆಟ್ಟ ಕೆಲಸ ಮಾಡಲು ಬಿಡದು. ಯಾರಾದರೂ ಮದ್ಯದಂಗಡಿ ಕಡೆ ಹೊರಟರೆ, ಕೊರಳಿನಲ್ಲಿರುವ ಪೊಲೀಸ್ ನಮ್ಮನ್ನು ತಡೆಯುತ್ತದೆ. ಹನುಮ ಮಾಲೆಯ ಕುರಿತು ಕೆಲವರು ಟೀಕೆ ಮಾಡಬಹುದು. ಕಮ್ಯುನಿಸ್ಟರು ಹಾಗೂ ನಮ್ಮಂಥ ಕಾವಿ ಬಟ್ಟೆ ಧರಿಸಿರುವ ಬಸವ ತಾಲಿಬಾನಿಗಳು ಮಾಲೆ ಬಗ್ಗೆ ಟೀಕೆ ಮಾಡಬಹುದು” ಎಂದು ವಿವಾದವನ್ನು ಮತ್ತೆ ಮೈಮೇಲೆ ಎಳೆದುಕೊಂಡಿದ್ದಾರೆ.
ಇನ್ನು ಈ ಸಂದರ್ಭದಲ್ಲೇ “ಕೈಯಲ್ಲಿ ಕೋಲು ಹಿಡಿದು ಓಡಾಡುವುದನ್ನು ಕೆಲವು ವಿರೋಧಿಸುತ್ತಾರೆ. ಕೋಲು ಬದಲು ಆರತಿ ತಟ್ಟೆ ಹಿಡಿಯಬೇಕಾ? ನಮ್ಮ ಹುಡುಗಿಯರನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ. ಅಂಥವರನ್ನು ಹಿಡಿದುಕೊಂಡು ಬಂದು ತಿಳಿಯುವ ಭಾಷೆಯಲ್ಲಿ ಹೇಳಬೇಕು” ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.
“ರಾತ್ರಿ ವೇಳೆ ಟೀ ಶರ್ಟ್, ಬರ್ಮೋಡ ಹಾಕಿ ಹೋಟೆಲ್, ಬಾರ್ಗೆ ಹೋಗುವವರಿಗೆ ಮಠವೇಕೆ? ಇಂಥವರಿಗೆ ಸನ್ಯಾಸತ್ವ ಯಾಕೆ ಬೇಕು” ಎಂದು ಪ್ರಶ್ನಿಸಿದ್ದು, ಹೀಗಿರುವವರು ಮಠ ಬಿಟ್ಟು ಹೋಗಿ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕನೇರಿ ಸ್ವಾಮೀಜಿಗೆ ಉಗಿದ ಸುಪ್ರೀಂ ಕೋರ್ಟ್- ಬೆಂಬಲಿಸಿದವರಿಗೂ ಪಾಠ
ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಅಕ್ಟೋಬರ್ 7ರಂದು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಲಿಂಗಾಯತ ಮಠಾಧಿಪತಿಗಳನ್ನು ವ್ಯಂಗ್ಯ ಮಾಡಿದ್ದರು. “ಲಿಂಗಾಯತ ಮಠಾಧಿಪತಿಗಳದ್ದು ಕಲಾವಿದರಿಂದ ಕೂಡಿದ ಒಕ್ಕೂಟ, ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿ. ಇವರು ದೇವರು ಗುಡಿಯಲ್ಲಿ ಇಲ್ಲ, ಗುಡಿಗೆ ಹೋಗಬೇಡಿ. ಹೊಟೇಲ್ನಲ್ಲಿ ಸಾರಾಯಿ ಕುಡಿದು, ಆರಾಮಾಗಿರಿ, ಮಾಂಸ ತಿನ್ನಿ ಎಂದು ಜನರಿಗೆ ಹೇಳುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ವಿಜಯಪುರ ಜಿಲ್ಲಾಧಿಕಾರಿ ಸ್ವಾಮೀಜಿಗೆ ಅಕ್ಟೋಬರ್ 16ರಿಂದ ಡಿಸೆಂಬರ್ 14ರವರೆಗೆ ವಿಜಯಪುರ ಜಿಲ್ಲೆ ಪ್ರವೇಶಿಸಬಾರದು ಎಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕಾಡಸಿದ್ದೇಶ್ವರ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅರ್ಜಿಯನ್ನು ಪೀಠ ವಜಾಗೊಳಿಸಿದೆ.





