ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರನ್ನು ಬದಲಾಯಿಸಬೇಕೆಂದು ಪ್ರಗತಿಪರ ಚಿಂತಕ, ಹೋರಾಟಗಾರ ಬಸವರಾಜ ಸೂಳಿಬಾವಿ ಆಗ್ರಹಿಸಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ಹೋರಾಟ ಸಮಿತಿಯ 6 ಜನ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ವಿಜಯಪುರ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ 108 ದಿನಗಳ ಕಾಲ ಶಾಂತಿಯುತ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿ ಎಲ್ಲ ರೀತಿಯ ಸೌಲಭ್ಯ ಹೊಂದಿರುವ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಬೇಕು ಹಾಗೂ ಸರ್ಕಾರದ ಉದ್ದೇಶಿತ ಖಾಸಗಿ (ಪಿಪಿಪಿ) ಮಾದರಿಯ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ನಡೆದ ಸತ್ಯಾಗ್ರಹವು ನ್ಯಾಯಯುತವಾಗಿತ್ತು. ಈ ಹೋರಾಟಕ್ಕೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರ ಮನೆಗಳ ಮುಂದೆ ಧರಣಿ ಹಮ್ಮಿಕೊಂಡಿದ್ದರು.
ಇದನ್ನೂ ಓದಿ: ವಿಜಯಪುರ | ಪಿಪಿಪಿ ವಿರುದ್ಧ ಹೋರಾಟಗಾರರ ಬಂಧನ: ಬಿಡುಗಡೆಗೆ ಜನ ವೇದಿಕೆ ಸಂಘಟನೆ ಆಗ್ರಹ
ಜನೆವರಿ 1ರಂದು ಉಸ್ತುವಾರಿ ಸಚಿವ ಎಂ ಬಿ ಪಾಟೀಲರ ಮನೆಯ ಮುಂದೆ ಹಮ್ಮಿಕೊಂಡಿದ್ದ ಧರಣಿ ಹೋರಾಟವನ್ನು ಹೋರಾಟವನ್ನು ಹತ್ತಿಕ್ಕುವ ದೃಷ್ಟಿಯಿಂದ ದಾರಿ ಮಧ್ಯದಲ್ಲಿ ಹೋರಾಟಗಾರರನ್ನು ತಡೆದು ಅವರ ಮೇಲೆ ದೈಹಿಕ ಹಲ್ಲೆ ಮಾಡಿ ಬಂಧನಕ್ಕೊಳಪಡಿಸಿದ್ದು ಖಂಡನೀಯವಾಗಿದೆ ಎಂದರು.
ಸಚಿವ ಎಂ.ಬಿ.ಪಾಟೀಲರು ಗೌಡ್ಕಿ ಗತ್ತಿನಲ್ಲಿದ್ದಾರೆ ಅವರನ್ನು ಸಿಎಂ ಸಿದ್ದರಾಮಯ್ಯ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬದಲಿಸಬೇಕು ಎಂದು ಆಗ್ರಹಿಸಿದರು.





