ಬೆಳಗಾವಿ ಜಿಲ್ಲೆಯ ಜಲಾನಯನ ಪ್ರದೇಶದ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಆತಂಕ ಎದುರಾಗಿದೆ.
ವರ್ಷಗಳಿಂದ ಸಾಕಿ ಸಲುಹಿದ ದನ ಕರುಗಳು ರಕ್ಷಣೆಯ ಚಿಂತೆ ಒಂದು ಕಡೆಯಾದರೆ ಮತ್ತೊಂದು ಕಡೆ ಗಂಟು ಮೂಟೆ ಕಟ್ಟಿಕೊಂಡು ತಾವಿದ್ದ ಊರಿಂದ ಮತ್ತೊಂದು ಊರಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇಲ್ಲಿನ ರೈತರಿಗೆ ಬಂದೊದಗಿದೆ.
ರಸ್ತೆ ಯಾವುದೋ ನದಿ ಯಾವುದೋ ಎಂಬ ಭಯದಲ್ಲಿರುವ ಜನರು, ದೂರದೂರಿಗೆ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಬೇಕಾದ ಸ್ಥಿತಿ ಬಂದೊದಗಿದೆ.
ಒಟ್ಟಿನಲ್ಲಿ, ಬೆಳಗಾವಿ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ ದೂಧಗಂಗಾ ನದಿಪಾತ್ರದ ಜನರ ಜೀವನ ಅಸ್ತವ್ಯಸ್ತವಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ಪ್ರವಾಹದಿಂದಾಗಿ ಜಿಲ್ಲೆಯ 44 ಸೇತುವೆಗಳು ಮುಳುಗಡೆಯಾಗಿವೆ. ಅಲ್ಲದೇ, ಅನೇಕ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. 80ಕ್ಕೂ ಹೆಚ್ಚು ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗಿದೆ. ಒಟ್ಟು 8 ಸಾವಿರಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. 20ಕ್ಕೂ ಹೆಚ್ಚು ಭಾಗದಲ್ಲಿ ಜಾನುವಾರು ಕೇಂದ್ರಗಳನ್ನು ತೆರೆಯಲಾಗಿದೆ.
ಕಂಡು ಕೇಳರಿಯದ ಪ್ರವಾಹಕ್ಕೆ ಇಡಿ ಬೆಳಗಾವಿ ಜಿಲ್ಲೆಯು ತತ್ತರಿಸಿ ಹೋಗಿದೆ. ಎಲ್ಲಿ ನೋಡಿದರೂ ಜಲರಾಶಿ. 150ಕ್ಕೂ ಅಧಿಕ ಗ್ರಾಮಗಳಿಗೆ ನೀರು ನುಗ್ಗುವ ಆತಂಕವಿದೆ.
ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ 4 ಅಡಿ ನೀರು ನುಗ್ಗಿದ್ದು, ಗ್ರಾಮದ 600 ಮನೆಗಳು ಜಲಾವೃತವಾಗಿದೆ. ಅಂದರೆ ಇಡಿ ಊರಿಗೆ ಊರು ಪ್ರವಾಹಕ್ಕೆ ತುತ್ತಾಗಿದೆ. ಸಾವಿರಾರು ಹೆಕ್ಟೇರ್ ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆಗಳು ಮಲಪ್ರಭೆಯ ಮಡಿಲು ಸೇರಿದೆ.
ಪಟಗುಂದಿ ಗ್ರಾಮದಲ್ಲಿ 150 ಮನೆಗಳು ಜಲಾವೃತವಾಗಿವೆ. ಇಲ್ಲಿಯ ಜನತೆ, ದನಕರುಗಳ ಜೊತೆ ಗಂಟುಮೂಟೆ ಕಟ್ಟಿಕೊಂಡು ಹೋಗುವುದು ಅನಿವಾರ್ಯವಾಗಿದೆ.
ಗೋಕಾಕ್ ನಗರದ ಕುಂಬಾರ ಗಲ್ಲಿ ಚುರುಮುರಿ ಬಟ್ಟಿ ಸೇರಿದಂತೆ ಅನೇಕ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ಸುಣದೊಳಿ ಗ್ರಾಮದಲ್ಲಿ ಪ್ರವಾಹದ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ನಿಪ್ಪಾಣಿ ತಾಲೂಕಿನ ಕಾರದಗಾ, ಸಾರವಾಡ, ಸಿದ್ನಾಳ ಹುನ್ನರಗಿ, ಕೊಣ್ಣೂರ, ಚಿಕ್ಕೋಡಿ ತಾಲೂಕಿನ ಕಲ್ಲೊಂದು, ಇಂಗಳಗಿ, ಉಡೂರ, ಜನನಾಂಗ, ತಂದೂರಿ, ಅಥಣಿ ತಾಲೂಕಿನ ಹುಲಗಬಾಳಿ, ಸಪ್ತಸಾಗರ, ನಾಗನೂರು ಪಿ.ಕೆ. ಇಂಗಳಗಾಂವ ಕಾಗವಾಡ ತಾಲೂಕಿನ ಶಹಪುರ, ಬಣಜವಾಡ, ಕೃಷ್ಣಾ ಕಿತ್ತೂರು, ಕಾತ್ರಾಳ ಹಾಗೂ ಹುಕ್ಕೇರಿ, ರಾಯಭಾಗ ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರು ಆವರಿಸಿರುವುದರಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಮದುರ್ಗ ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರು ನುಗ್ಗುವ ಆತಂಕವಿದೆ
2005, 2009, 2019 ರಲ್ಲಿ ಮೂರು ಭೀಕರ ಪ್ರವಾಹಗಳ ಹೊಡೆತಕ್ಕೆ ಸಿಲುಕಿದ್ದ ಬೆಳಗಾವಿ ಜಿಲ್ಲೆಯ ಜನತೆ, 2019ರಲ್ಲಿ ಬಂದ ಪ್ರವಾಹದಿಂದಾಗಿ 2 ಲಕ್ಷಕ್ಕಿಂತಲೂ ಅಧಿಕ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿತ್ತು. 60 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತಲ್ಲದೆ, ಒಟ್ಟು 11 ಸಾವಿರ ಕೋಟಿ ನಷ್ಟ ಉಂಟಾಗಿತ್ತು.

ಈ ವರ್ಷದ ಪ್ರವಾಹದದಿಂದಾಗಿ ಸಾವಿರಾರು ಹೆಕ್ಟೇರ್ ಬೆಳೆಗಳು ನೀರಿನಲ್ಲಿ ಮುಳುಗಿವೆ. ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬು, ಭತ್ತ, ಸೋಯಾ, ಅವರೆ, ಮುಸುಕಿನ ಜೋಳ, ಈರುಳ್ಳಿ, ಹೆಸರು ಬೆಳೆ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಹಿಂದಿನ ವರ್ಷಗಳಲ್ಲಿ ಬರಗಾಲದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅನೇಕ ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಧಾನ್ಯಗಳು ಪ್ರವಾಹದ ಪಾಲಾಗಿವೆ.
ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಬೆಳಗಾವಿ ಜಿಲ್ಲೆಯ ರೈತರ ಬದುಕಿಗೆ ಸರ್ಕಾರವು ಆದಷ್ಟು ಬೇಗ ಆಸರೆಯಾಗಿ ನಿಲ್ಲಬೇಕಿದೆ. ಪ್ರವಾಹಕ್ಕೆ ತುತ್ತಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕಿದೆ. ಜೊತೆಗೆ ಕೇಂದ್ರ ಸರ್ಕಾರವು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಿಸುವ ಕಾರ್ಯಕ್ಕೆ ಮುಂದಾಗಲಿ ಎನ್ನುವುದು ಪ್ರವಾಹದಲ್ಲಿ ಬೆಳೆ ನಷ್ಟಕ್ಕೆ ಒಳಗಾದ ರೈತರ ಒತ್ತಾಯವಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




