ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣಾ ಕಣ ರಂಗೇರಿದ್ದು, ಬೆಳಗಾವಿಯ ನಿಪ್ಪಾಣಿಯಿಂದ ಸ್ಪರ್ಧೆ ಮಾಡಿರುವ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ತಾಲೂಕಿನ ಪಿಕೆಪಿಎಸ್ ಸದಸ್ಯ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡುವಂತಾಗಿದೆ. ಜೊಲ್ಲೆ ಕ್ಯಾಂಪಿನಲ್ಲಿದ್ದ ಪಿಕೆಪಿಎಸ್ ಸದಸ್ಯರ ನಡುವೆ ಜಗಳ ಏರ್ಪಟ್ಟಿದ್ದು, ಒಬ್ಬರಿಗೊಬ್ಬರು ಬೈದಾಡಿಕೊಂಡ ಪ್ರಸಂಗವೂ ನಡೆದಿದೆ. ಈ ಮಧ್ಯೆ ನಮ್ಮನ್ನು ಇಲ್ಲಿಂದ ಬಿಟ್ಟುಬಿಡಿ, ಇಲ್ಲದಿದ್ದರೆ ನಾವೇ ಓಡಿ ಹೋಗುತ್ತೇವೆ ಎಂಬ ಎಚ್ಚರಿಕೆಯನ್ನೂ ಸದಸ್ಯರು ನೀಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನಿಪ್ಪಾಣಿ ತಾಲೂಕಿನ ಹಲವು ಪಿಕೆಪಿಎಸ್ ನಲ್ಲಿ ಡೆಲಿಗೆಟ್ ಪಡೆಯುವ ವೇಳೆ ಪಾಟೀಲ ಅವರನ್ನೇ ಬೆಂಬಲಿಸುವ ನಿರ್ಧಾರಕ್ಕೆ ಮತದಾರರು ಬಂದಿದ್ದರಂತೆ. ಆದರೆ ಈಗ ಹಣದ ಆಸೆಯಿಂದ ಜೊಲ್ಲೆ ಜೊತೆ ಸೇರಿದ್ದು ಇದರಿಂದ ಡೆಲಿಗೆಟ್ ಗಳು ನಮ್ಮ ಮಾತು ತಪ್ಪಿದ್ದಾರೆ ಎಂದು ಪಿಕೆಪಿಎಸ್ ಸದಸ್ಯರು ಆರೋಪಿಸುತ್ತಿದ್ದಾರೆ. ಸದ್ಯ ಜೊಲ್ಲೆ ಹಿಡಿತದಲ್ಲಿರುವ ಪಿಕೆಪಿಎಸ್ ಸದಸ್ಯ ಮತದಾರರಿಗೆ ತಮ್ಮ ಗ್ರಾಮದ ಸದಸ್ಯರಿಂದ ಕರೆ ಬರುತ್ತಿದ್ದು, ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸದಸ್ಯರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಒಕ್ಕೂಟದ ನಿರ್ಧಾರಕ್ಕೆ ಚ್ಯುತಿ ತಂದ ಪಿಕೆಪಿಎಸ್ ಡೆಲಿಗೆಟ್ ವಿರುದ್ಧ ನಿಪ್ಪಾಣಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸ್ವತಃ ರೈತರೇ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಪಿಕೆಪಿಎಸ್ ಮತದಾರರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ | ಮದುವೆಯಾಗಿ ನಾಲ್ಕು ತಿಂಗಳಲ್ಲೇ ಕೊಲೆ; ಹೆಂಡತಿಯ ಕೊಂದು ಬೆಡ್ ಕೆಳಗೆ ಶವ ಅಡಗಿಸಿದ ಪತಿ!
ಸದಸ್ಯರ ನಡುವಿನ ಜಗಳ ಬಿಡಿಸಲು ಜೊಲ್ಲೆ ಟೀಂ ಹೈರಾಣಾಗಿರುವುದಂತೂ ಸತ್ಯ. ಅಕ್ಟೋಬರ್ 19 ರಂದು ಚುನಾವಣೆ ನಡೆಯಲಿದ್ದು, ಅಡ್ಡ ಮತದಾನದ ಭೀತಿಯಲ್ಲಿ ನಾಯಕರು ಇರುವುದು ಸ್ಪಷ್ಟವಾಗಿದೆ.
ಶಾಸಕ ರಾಜು ಕಾಗೆ ಅವಿರೋಧ ಆಯ್ಕೆ ವಿಚಾರವಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ವಿರುದ್ಧ ಅನೇಕ ಪಿಕೆಪಿಎಸ್ ಮತದಾರರು ಸಿಟ್ಟು ಹೊರ ಹಾಕಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.





