ಬೆಳಗಾವಿ ನಗರದ ಕೇಂದ್ರೀಯ ಬಸ್ ನಿಲ್ದಾಣ (ಸಿಬಿಟಿ)ಯಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆದರೆ ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಿದ ಹೊಸ ಸಿಬಿಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕಳೆದ ಅಕ್ಟೋಬರ್ 4ರಂದು ಉದ್ಘಾಟನೆ ಮಾಡಿದರೂ, ಈವರೆಗೆ ಕಾರ್ಯಾರಂಭವಾಗಿಲ್ಲ. ಇದರಿಂದ ಕಾಲೇಜು ವಿದ್ಯಾರ್ಥಿಗಳು , ಹಿರಿಯರು ದಿನನಿತ್ಯ ಕೆಲಸಕ್ಕಾಗಿ ಹೊರಡುವ ಪ್ರಯಾಣಿಕರು ಪರದಾಡುವಂತಾಗಿದೆ.
2018-19ನೇ ವರ್ಷದಲ್ಲಿ ಹೊಸ ಸಿಬಿಟಿ ನಿರ್ಮಾಣ ಕಾರ್ಯಾರಂಭವಾಗಿತ್ತು. ಆದರೆ ಆಡಳಿತಾತ್ಮಕ ಕಾರಣಗಳಿಂದಾಗಿ 2025ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಉದ್ಘಾಟನೆಯೂ ಆಗಿದೆ. ಆದರೂ ಕೂಡ ಸಿಬಿಟಿ ಕಾರ್ಯಾರಂಭವಾಗದೇ ಇರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸಿಬಿಟಿ ತಾತ್ಕಾಲಿಕವಾಗಿ ಹಳೆಯ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳಗಾವಿ ನಗರದಿಂದ ಸುಮಾರು 150ಕ್ಕೂ ಹೆಚ್ಚು ಬಸ್ಗಳು ಓಡಾಡುತ್ತಿವೆ. ಹಾಗೂ ಸಾವಿರಾರು ಪ್ರಯಾಣಿಕರು ನಿತ್ಯವೂ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ತೊಂದರೆಯನ್ನು ಉಂಟುಮಾಡಿದೆ.

ನಿತ್ಯ ಸಿಬಿಟಿಯಿಂದ ಪ್ರಯಾಣ ಮಾಡುವ ನಾಮದೇವ ಮರಾಠೆ ನಗರ ಪ್ರಯಾಣಿಕ ಈ ದಿನ.ಕಾಮ್ ಜತೆಗೆ ಮಾತನಾಡಿ “ಸಿಬಿಟಿ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಮಳೆ ಬಂದರೆ ಪ್ರಯಾಣಿಕರಿಗೆ ಆಶ್ರಯಕ್ಕೆ ಸ್ಥಳವಿಲ್ಲ. ವಯಸಾದವರೂ ಕೂಡ ನಿಂತಕೊಂಡೇ ಬಸ್ಗಳಿಗೆ ಕಾಯುವ ಪರಿಸ್ಥಿತಿ ಎದುರಾಗಿದೆ” ಎಂದು ಪ್ರಯಾಣಿಕರ ಸಮಸ್ಯೆಗಳ ಕುರಿತು ತಿಳಿಸಿದರು.
“ನಿತ್ಯ ಸಿಬಿಟಿಯಿಂದ ಪ್ರಯಾಣಿಸುವ ಹರ್ಷ ಕಾಂಬ್ಲೆ ಈ ದಿನ.ಕಾಮ್ ಜತೆ ಮಾತನಾಡಿ, “ಸಿಬಿಟಿಗೆ ಸಾವಿರಾರು ಪ್ರಯಾಣಿಕರು ಬರುವುದರಿಂದ ಕುಳಿತುಕೊಳ್ಳಲು ಸೀಟುಗಳೇ ಇಲ್ಲ. ಹಿರಿಯರು, ವಿದ್ಯಾರ್ಥಿಗಳು ನಿಂತುಕೊಂಡೇ ಬಸ್ ಕಾಯಬೇಕಾದ ಪರಿಸ್ಥಿತಿ ಇದೆ. ಮುಖ್ಯಮಂತ್ರಿಯವರೂ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದರೂ ಕೂಡ ಸಿಬಿಟಿ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬೇಸಿಗೆ ಕಾಲದಲ್ಲಿ ಬಿಸಿಲಿನಲ್ಲಿಯೇ ನಿಂತು ಬಸ್ ಕಾಯುವ ಪರಿಸ್ಥಿತಿ ಇದೆ” ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿದ ಹೊಸ ಸಿಬಿಟಿಯನ್ನು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯವರಿಗೆ
ಇನ್ನೂ ಅಧಿಕೃತವಾಗಿ ಹಸ್ತಾಂತರಿಸದ ಕಾರಣ ಹೊಸ ಸಿಬಿಟಿ ಆರಂಭವಾಗಿಲ್ಲ.
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟನೆ ಮಾಡಿದರೂ ಕಾರ್ಯಾರಂಭದಲ್ಲಿ ನಡೆಯುತ್ತಿರುವ ವಿಳಂಬ ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿದೆ. ಆದಷ್ಟು ಬೇಗನೆ ಸಿಬಿಟಿ ಕಾರ್ಯಾರಂಭವಾಗಬೇಕೆಂಬುದು ಬೆಳಗಾವಿ ನಗರದ ಪ್ರಯಾಣಿಕರ ಒತ್ತಾಯವಾಗಿದೆ.
ಇದನ್ನೂ ಓದಿದ್ದೀರಾ? ಬೆಂಬಲ ಬೆಲೆಗೆ ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಧರಣಿ: ನ.7ರಂದು ರಾಜ್ಯಾದ್ಯಂತ ಹೋರಾಟಕ್ಕೆ ರೈತರ ನಿರ್ಧಾರ
ಹೊಸ ಸಿಬಿಟಿ ನಿರ್ಮಾಣ ಪೂರ್ಣಗೊಂಡು ಉದ್ಘಾಟನೆಯಾದರೂ ಕಾರ್ಯಾರಂಭವಾಗದಿರುವುದು ಬೆಳಗಾವಿ ನಗರದ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಹಾಗೂ ಸಂಬಂಧಿತ ಇಲಾಖೆ ತಕ್ಷಣ ಕ್ರಮ ಕೈಗೊಂಡು ನೂತನ ಸಿಬಿಟಿಯನ್ನು ಸಾರ್ವಜನಿಕ ಸೇವೆಗೆ ಒದಗಿಸಿದರೆ ಮಾತ್ರ ಪ್ರಯಾಣಿಕರ ಸಂಕಷ್ಟ ನಿವಾರಣೆಯಾಗಲಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಯೋಜನೆಗಳನ್ನು ಸಮಯಕ್ಕೆ ಅನುಗುಣವಾಗಿ ಕಾರ್ಯಗತಗೊಳಿಸುವುದು ಆಡಳಿತದ ಹೊಣೆಗಾರಿಕೆಯಾಗಿದೆ ಎನ್ನುವದು ಪ್ರಯಾಣಿಕರ ಅಭಿಪ್ರಾಯವಾಗಿದ್ದು, ಆದಷ್ಟು ಬೇಗನೆ ಹೊಸ ಸಿಬಿಟಿ ಆರಂಭವಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




