ಬೆಳಗಾವಿ ನಗರ ಸಾರಿಗೆ ವ್ಯವಸ್ಥೆಯ ಹೊಸ ಅಧ್ಯಾಯ ಆರಂಭವಾಗಿದ್ದು, ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾದ ನೂತನ ನಗರ ಸಾರಿಗೆ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ 700 ಹೊಸ ಬಸ್ಸುಗಳ ಜೊತೆಗೆ ಬೆಳಗಾವಿ ನಗರ ಬಳಕೆಗೆ ಹೊಸದಾಗಿ 100 ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಗೊಳಿಸಿರುವುದಾಗಿ ಅವರು ಘೋಷಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ 50% ಅನುದಾನದೊಂದಿಗೆ ಒಟ್ಟು 49.20 ಕೋಟಿ ವೆಚ್ಚದಲ್ಲಿ ಸುಮಾರು 2 ಎಕರೆ 19 ಗುಂಟೆ ವಿಸ್ತೀರ್ಣದಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಅದೇ ರೀತಿ 5 ಎಕರೆ 5 ಗುಂಟೆ ವಿಸ್ತೀರ್ಣದಲ್ಲಿ, ರೂ.24 ಕೋಟಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್ ಘಟಕ ಸ್ಥಾಪನೆ ಮಾಡಲಾಗಿದೆ ಎಂದರು.

“ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎರಡುವರೆ ವರ್ಷಗಳಲ್ಲಿ 10000 ಹೊಸ ನೇಮಕಾತಿ ಮಾಡಲಾಗಿದೆ. 215 ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಶಕ್ತಿ ಯೋಜನೆಯು ಯಶಸ್ವಿಯಾಗಿ ನಡೆಯುತ್ತಿದ್ದು, ಒಟ್ಟು 565.48 ಕೋಟಿ ಮಹಿಳಾ ಟಿಕೇಟ್ ವಿತರಣೆಯಾಗಿದೆ. ಇದಕ್ಕಾಗಿ ರೂ.14456 ಕೋಟಿ ವೆಚ್ಚವಾಗಿದೆ. ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ( Golden Book of World Records) ಮತ್ತು ಇಂಟರ್ ನ್ಯಾಶನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ( International Book of World Records ) ಗಳಲ್ಲಿ ಸೇರ್ಪಡೆಯಾಗಿರುವುದು ಶಕ್ತಿ ಯೋಜನೆಯ ಯಶಸ್ಸು” ಎಂದು ತಿಳಿಸಿದರು.
ನೂತನ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಒದಗಿಸಿದ ಸೌಕರ್ಯಗಳು: ಬಸ್ ನಿಲ್ದಾಣದಲ್ಲಿ 28 ಅಂಕಣಗಳು,1365 ಸಾರಿಗೆ ಸರತಿಗಳು ನಿರ್ಗಮನ, 56 ಬಡಾವಣೆಗಳು ಒಳಗೊಂಡಂತೆ ಉಪನಗರದ 87 ಸ್ಥಳಗಳಿಗೆ ಒಟ್ಟು 143 ಸ್ಥಳಗಳಿಗೆ 21 ಕಿಮೀ ವ್ಯಾಪ್ತಿಯಲ್ಲಿ ಬಸ್ ಸೌಲಭ್ಯ, ಪ್ರತಿ ದಿನ ಸುಮಾರು 96 ಸಾವಿರ ಜನ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ. ನೂತನ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ತಳಮಹಡಿ ಮತ್ತು ಐದು(5) ಮಹಡಿ, ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಾಲಯಗಳು, ಶಿಶುಗಳಿಗೆ ಹಾಲುಣಿಸುವ ಪ್ರತ್ಯೇಕ ಕೊಠಡಿ, ವಿಕಲಚೇತನರ ಪ್ರತ್ಯೇಕ ರಾಂಪ್ ವ್ಯವಸ್ಥೆ, ಪೊಲೀಸ್ ಚೌಕಿ, ವಿಭಾಗೀಯ ಕಚೇರಿ, , ಸಬ್-ವೇ ಸಂಪರ್ಕ, ಲಿಫ್ಟ್, ಎಸ್ಕಲೇಟರ್ ಸೌಲಭ್ಯ ಕೂಡ ಇದೆ.
ಇದನ್ನೂ ಓದಿ: ಬೆಳಗಾವಿ | ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ; ರಮೇಶ್ ಕತ್ತಿ ಪೆನಲ್ ಗೆಲುವಿಗೆ ಕಾರಣವಾದ ಅಂಶಗಳಿವು…
ಕಾರ್ಯಕ್ರಮದಲ್ಲಿ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು, ಮಾನ್ಯ ಲೋಕೋಪಯೋಗಿ ಸಚಿವರು, ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು, ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, ಮಾನ್ಯ ಅಧ್ಯಕ್ಷರು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.





