ಬೆಳಗಾವಿ ಜಿಲ್ಲೆಯ ಸ್ಥಳೀಯ ರಾಜಕಾರಣ ರಾಜ್ಯ ಮಟ್ಟದಲ್ಲೂ ಗಮನ ಸೆಳೆಯುವಂಥದ್ದು. ಇಲ್ಲಿ ಕುಟುಂಬ ಹಾಗೂ ಜಾತಿ ರಾಜಕಾರಣದ ಪ್ರಭಾವ ಇದ್ದರೂ, ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ತಾವು ನಂಬುವ ನಾಯಕರಿಗೆ ಆದ್ಯತೆ ನೀಡುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ನೇತೃತ್ವದ ಪೆನಲ್ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 15 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕತ್ತಿ ಪೆನೆಲ್ ಎಲ್ಲ ಸ್ಥಾನಗಳನ್ನೂ ಗೆದ್ದು, ಜಾರಕಿಹೊಳಿ ಸಹೋದರರಿಗೆ ತೀವ್ರ ಸವಾಲು ಎಸೆದಿದೆ. ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಫಲಿತಾಂಶವು ಕೇವಲ ಸಂಘದ ಮಟ್ಟದಲ್ಲೇ ಸೀಮಿತವಾಗಿಲ್ಲ, ಅದು ಹುಕ್ಕೇರಿ ಹಾಗೂ ಬೆಳಗಾವಿ ಜಿಲ್ಲೆಯ ರಾಜಕೀಯ ಭವಿಷ್ಯಕ್ಕೂ ದಾರಿ ತೋರಿಸಿದೆ. ಈ ಫಲಿತಾಂಶವು ಕತ್ತಿ ಕುಟುಂಬದ ಬಲವನ್ನು ಪುನಃ ದೃಢಪಡಿಸಿದರೆ, ಜಾರಕಿಹೊಳಿ ಸಹೋದರರ ಪ್ರಭಾವಕ್ಕೆ ಪೆಟ್ಟು ಕೊಟ್ಟಿದೆ.
ಈ ಚುನಾವಣೆ ಕತ್ತಿ ಮತ್ತು ಜಾರಕಿಹೊಳಿ ಬಣಗಳ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿ ಪರಿಣಮಿಸಿತ್ತು. ಪರಸ್ಪರ ಆರೋಪ-ಪ್ರತ್ಯಾರೋಪಗಳು, ಹಣಬಲ ಬಳಕೆ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು. ಸ್ಥಳೀಯ ಗಲಾಟೆಗಳು ಜಿಲ್ಲೆಯ ರಾಜಕೀಯದಲ್ಲಿಯೇ ಅಸ್ಥಿರತೆ ಸೃಷ್ಟಿ ಮಾಡಿದ್ದವು.
ಸೆಪ್ಟೆಂಬರ್ 28ರಂದು ನಡೆದ ಚುನಾವಣೆಯಲ್ಲಿ ಒಟ್ಟು 60,046 ಮತದಾರರಲ್ಲಿ 41,050 ಮಂದಿ ತಮ್ಮ ಮತ ಚಲಾಯಿಸಿದ್ದು, ಶೇ. 68.37 ರಷ್ಟು ಮತದಾನ ದಾಖಲಾಗಿದೆ. ರಾತ್ರಿ ಒಂದು ಗಂಟೆಯವರೆಗೂ ನಡೆದ ಮತ ಎಣಿಕೆ ಕಾರ್ಯ ಜನರಲ್ಲಿ ಕುತೂಹಲ ಹೆಚ್ಚಿಸಿತ್ತು. ಅಂತಿಮವಾಗಿ ಫಲಿತಾಂಶ ಹೊರಬಂದಾಗ, ಕತ್ತಿ ಬಣವು ಸಂಪೂರ್ಣ ಮೇಲುಗೈ ಸಾಧಿಸಿತು. 15 ಸ್ಥಾನಗಳಲ್ಲಿ ರಮೇಶ್ ಕತ್ತಿ ಮತ್ತು ಎ ಬಿ ಪಾಟಿಲ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಈ ಭರ್ಜರಿ ಗೆಲುವಿಗೆ ಕಾರಣವಾದ ಅಂಶಗಳು ಹೀಗಿವೆ…
ಸ್ಥಳೀಯ ನಾಯಕತ್ವದ ಪ್ರಭಾವ: ಹುಕ್ಕೇರಿಯ ಮತದಾರರು ಕಳೆದ ಹಲವು ದಶಕಗಳಿಂದ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡುತ್ತಿರುವುದು ಮತ್ತೊಮ್ಮೆ ದೃಢಪಟ್ಟಿದೆ. ರಮೇಶ್ ಕತ್ತಿಯವರ “ಹೊರಗಿನವರಿಗೆ ಅವಕಾಶ ಕೊಡಬೇಡಿ” ಎಂಬ ಸಂದೇಶ ಮತದಾರರಲ್ಲಿ ಭಾರಿ ಪ್ರಭಾವ ಬೀರಿದ್ದು, ಸ್ಥಳೀಯತೆಗೆ ಬಲ ನೀಡಿರುವುದು ಗೆಲುವಿಗೆ ಮುಖ್ಯ ಕಾರಣವಾಗಿರುವ ಸಾಧ್ಯತೆಗಳಿವೆ.
ಕುಟುಂಬ ರಾಜಕೀಯದ ಬಲ: ಉಮೇಶ್ ಕತ್ತಿಯವರು ಶಾಸಕರಾಗಿ–ಸಚಿವರಾಗಿ ಮಾಡಿದ ಕೆಲಸಗಳು ಹಾಗೂ ನಿಖಿಲ್ ಕತ್ತಿಯವರ ಪ್ರಸ್ತುತ ಶಾಸಕ ಹುದ್ದೆ.. ಇವುಗಳಿಂದ ಕತ್ತಿ ಕುಟುಂಬವು ಮತದಾರರೊಂದಿಗೆ ನಿರಂತರ ಸಂಪರ್ಕ ಉಳಿಸಿಕೊಂಡಿದೆ. ಇದು ಕುಟುಂಬ ರಾಜಕೀಯವೇ ಇನ್ನೂ ಹುಕ್ಕೇರಿಯಲ್ಲಿ ಗಟ್ಟಿಯಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ.

ಡಿಸಿಸಿ ಬ್ಯಾಂಕ್ ಚುನಾವಣೆಯ ಪ್ರಭಾವ: ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ಜಾರಕಿಹೊಳಿ ಸಹೋದರರು ಹುಕ್ಕೇರಿ ರಾಜಕೀಯದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಲು ಯತ್ನಿಸುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ಕಾರ್ಯತಂತ್ರ ಮತ್ತು ಗಲಾಟೆಗಳು, ಆರೋಪಗಳು ಈ ಸಂಘದ ಚುನಾವಣೆಯ ಫಲಿತಾಂಶವು ಅವರ ತಂತ್ರಗಳಿಗೆ ಅಡ್ಡಿ ಉಂಟುಮಾಡಿದೆ. ಮುಂದಿನ ಬ್ಯಾಂಕ್ ಚುನಾವಣೆ ಹಾಗೂ ವಿಧಾನಸಭಾ ರಾಜಕೀಯದಲ್ಲೂ ಈ ಪೈಪೋಟಿ ತೀವ್ರಗೊಳ್ಳುವುದು ಖಚಿತ.
ಮೈತ್ರಿ ಮತ್ತು ಸ್ಥಳೀಯ ವರ್ಚಸ್ಸು: ಎಂ ಬಿ ಪಾಟೀಲರಂತಹ ಸ್ಥಳೀಯ ಪ್ರಭಾವಿ ಮುಖಂಡರು ಕತ್ತಿ ಪೆನಲ್ ಪರ ಬಲ ನೀಡಿದ್ದು, ರಾಜಕೀಯ ಮೈತ್ರಿಗಳ ಮಹತ್ವವನ್ನು ತೋರಿಸಿದೆ. ಭವಿಷ್ಯದಲ್ಲೂ ಇಂತಹ ಮೈತ್ರಿಗಳು ಕ್ಷೇತ್ರದ ರಾಜಕೀಯ ಸಮೀಕರಣಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು.
ಭವಿಷ್ಯದ ರಾಜಕೀಯ ಪರಿಣಾಮ: ಕತ್ತಿ ಕುಟುಂಬವು ಈ ಜಯದಿಂದಾಗಿ ಸ್ಥಳೀಯ ರಾಜಕೀಯದಲ್ಲಿ ತಮ್ಮ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದು, ಮುಂದಿನ ಡಿಸಿಸಿ ಬ್ಯಾಂಕ್ ಹಾಗೂ ವಿಧಾನಸಭಾ ಚುನಾವಣೆಗಳಿಗೆ ಆತ್ಮವಿಶ್ವಾಸ ಗಳಿಸಿದೆ. ಜಾರಕಿಹೊಳಿ ಸಹೋದರರಿಗೆ ತಾತ್ಕಾಲಿಕ ಹಿನ್ನಡೆಯಾದರೂ, ತಮ್ಮ ಪ್ರಬಲ ಕಾರ್ಯತಂತ್ರದಿಂದ ಮತ್ತೆ ಬಲವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಫಲಿತಾಂಶವು ಕತ್ತಿ–ಜಾರಕಿಹೊಳಿ ಬಣಗಳ ನಡುವಿನ ರಾಜಕೀಯ ಶಕ್ತಿಪರೀಕ್ಷೆಯ ಪ್ರಥಮ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಬೆಳಗಾವಿ ರಾಜಕೀಯವನ್ನು ನಿರ್ಧರಿಸುವ ಪ್ರಮುಖ ತಿರುವಾಗಿ ಪರಿಣಮಿಸಬಹುದು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಫಲಿತಾಂಶವು ಕೇವಲ ಒಂದು ಸಂಘದ ಆಂತರಿಕ ಚುನಾವಣೆ ಅಲ್ಲ; ಅದು ಬೆಳಗಾವಿ ಜಿಲ್ಲೆಯ ರಾಜಕೀಯದ ದಿಕ್ಕನ್ನು ತೋರಿಸುವ ಮಹತ್ವದ ಸೂಚಕವಾಗಿದೆ. ಕತ್ತಿ ಕುಟುಂಬವು ಸ್ಥಳೀಯ ರಾಜಕೀಯದಲ್ಲಿ ತನ್ನ ಬಲವನ್ನು ಮತ್ತೊಮ್ಮೆ ದೃಢಪಡಿಸಿದ್ದು, ಸ್ಥಳೀಯತೆಯ ಅಸ್ತ್ರವು ಇನ್ನೂ ಮತದಾರರ ಮನದಲ್ಲಿ ಬಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಈ ಜಯ ಸಾಬೀತುಪಡಿಸಿದೆ.
ಇದನ್ನೂ ಓದಿ: ಬೆಳಗಾವಿ | ಗುಂಡುರಾವ ಕರಿಗಾರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ
ಇನ್ನೊಂದೆಡೆ, ಜಾರಕಿಹೊಳಿ ಸಹೋದರರ ಬಣಕ್ಕೆ ಇದು ಸಣ್ಣ ಹಿನ್ನಡೆಯಾದರೂ, ಅವರ ರಾಜಕೀಯ ತಂತ್ರ ಮುಂದಿನ ದಿನಗಳಲ್ಲಿ ಪೈಪೋಟಿ ಇನ್ನಷ್ಟು ಕಠಿಣಗೊಳ್ಳುವುದು ಖಚಿತ. ಎ. ಬಿ. ಪಾಟೀಲರಂತಹ ಸ್ಥಳೀಯ ನಾಯಕರ ಬೆಂಬಲವು ಕತ್ತಿ ಕುಟುಂಬದ ಬಲವನ್ನು ಹೆಚ್ಚಿಸಿದರೆ, ಮೈತ್ರಿಗಳ ಮಹತ್ವವನ್ನೂ ತೋರಿಸಿದೆ.
ಒಟ್ಟಿನಲ್ಲಿ, ಈ ಚುನಾವಣೆ ಫಲಿತಾಂಶವು ಹುಕ್ಕೇರಿ ರಾಜಕೀಯದಲ್ಲಿ ಕತ್ತಿ ಕುಟುಂಬದ ಹಿಡಿತ ಅಚಲವಾಗಿರುವುದನ್ನು ತೋರಿಸಿದಂತೆಯೇ, ಬೆಳಗಾವಿ ಜಿಲ್ಲೆಯ ಭವಿಷ್ಯದ ರಾಜಕೀಯ ಸಮೀಕರಣಗಳಿಗೂ ದಾರಿತೋರಿಸಿದೆ. ಮುಂದಿನ ಡಿಸಿಸಿ ಬ್ಯಾಂಕ್ ಹಾಗೂ ವಿಧಾನಸಭಾ ಚುನಾವಣೆಗಳತ್ತ ಎಲ್ಲರ ಕಣ್ಣು ತಿರುಗಿದ್ದು, ಕತ್ತಿ–ಜಾರಕಿಹೊಳಿ ಪೈಪೋಟಿ ರಾಜ್ಯ ರಾಜಕೀಯಕ್ಕೂ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸುತ್ತಿವೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




