ಬೆಳಗಾವಿ ಜಿಲ್ಲೆಯ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅವಧಿ ಮೀರಿದ ಪೌಷ್ಟಿಕ ಆಹಾರ ವಿತರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಗ್ರಾಮದ ಮೂರು ಅಂಗನವಾಡಿ ಕೇಂದ್ರಗಳಲ್ಲಿ ಸಂಗ್ರಹಿತ ಆಹಾರ ವಸ್ತುಗಳನ್ನು ಪರಿಶೀಲಿಸಿದ ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಅವರು, ಮೂರುರಿಂದ ಆರು ತಿಂಗಳ ಹಿಂದೆಯೇ ಅವಧಿ ಮುಗಿದ ಆಹಾರ ವಸ್ತುಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸ್ಥಳೀಯ ಯುವಕರೊಂದಿಗೆ ನಡೆಸಿದ ಪರಿಶೀಲನೆ ವೇಳೆ ಹುಳು ಹಿಡಿದ ರವೆ, ಸಿರಿಧಾನ್ಯ ಲಡ್ಡು, ಸಾಂಬಾರ್ ಪುಡಿ ಹಾಗೂ ಸಾಸಿವೆ ಪ್ಯಾಕೆಟ್ಗಳ ಮೇಲೆ ಅಕ್ಟೋಬರ್ ಮತ್ತು ನವೆಂಬರ್ 2025ರ ಅವಧಿ ದಿನಾಂಕಗಳು ನಮೂದಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
2025ರಲ್ಲೇ ಅವಧಿ ಮುಗಿದ ಸಿರಿಧಾನ್ಯ ಲಡ್ಡುಗಳನ್ನು 2026ರ ಫೆಬ್ರವರಿಯಲ್ಲಿ ವಿತರಿಸಲಾಗಿದೆ ಎನ್ನಲಾಗುತ್ತಿದ್ದು, ಈ ವಿಚಾರ ತಿಳಿದ ಪೋಷಕರಲ್ಲಿ ಆತಂಕ ಮನೆಮಾಡಿದೆ. “ಇದು ಚಿಕ್ಕ ಮಕ್ಕಳ ಜೀವದ ಜೊತೆ ಆಟವಾಡುವಂತದ್ದು. ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು?” ಎಂದು ಕಸ್ತೂರಿ ಬಾವಿ ಪ್ರಶ್ನಿಸಿದ್ದಾರೆ. ಸಮಸ್ಯೆ ಒಂದೇ ಗ್ರಾಮಕ್ಕೆ ಸೀಮಿತವಲ್ಲದೆ ಇತರಡೆಗಳಲ್ಲಿಯೂ ಇರಬಹುದೆಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ.
ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಫೆಬ್ರವರಿ 7ರಂದು ನಡೆದ ಪರಿಶೀಲನೆಯಲ್ಲಿ ಯಾವುದೇ ಅವಧಿ ಮೀರಿದ ಆಹಾರ ಪ್ಯಾಕೆಟ್ಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈರಲ್ ವೀಡಿಯೋಗಳು ತಪ್ಪು ಮಾಹಿತಿಯನ್ನು ಹರಡುತ್ತಿದ್ದು, ಇದೊಂದು ಪಿತೂರಿಯಾಗಿರಬಹುದು ಎಂದು ತಿಳಿಸಿದ್ದಾರೆ.
ಪ್ರಕರಣದ ನಿಜಾಸ್ತಿತಿ ತಿಳಿಯಲು ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬರುತ್ತಿದೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯಕ್ಕೂ ಅವಕಾಶ ಇರಬಾರದು ಎಂಬುದು ಪೋಷಕರ ಅಭಿಪ್ರಾಯವಾಗಿದೆ.




