ಬೆಳಗಾವಿ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಟಕಾ ಜುಗಾರಿ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.
ನಗರದ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರ ಗಲ್ಲಿಯ ಹಳೆ ಮೊಡಕಾ ಬಜಾರ್ ಬಳಿ ಅಕ್ರಮವಾಗಿ ಮಟಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪಿಐ ಮಂಜುನಾಥ ನಾಯಕ ಅವರ ನೇತೃತ್ವದ ತಂಡ ದಾಳಿ ನಡೆಸಿತು.
ಕಾರ್ಯಾಚರಣೆಯಲ್ಲಿ ಅಶೋಕ ಪವಾರ, ಗಜಾನನ ಪಾಟೀಲ ಹಾಗೂ ಹವನ ಭಾತಖಾಂಡೆ ಬಂಧಿತರಾಗಿದ್ದಾರೆ. ಆರೋಪಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ‘ಶ್ರೀದೇವಿ ನೈಟ್ ಮೇನ್ ಬಜಾರ್’ ಹೆಸರಿನಲ್ಲಿ ಓಸಿ ಮಟಕಾ ಆಟವಾಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತರಿಂದ ₹11,180 ನಗದು ಹಾಗೂ ಮಟಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಸಂಗ್ರಹವಾದ ಹಣವನ್ನು ಬೆಳಗಾವಿಯ ಫಾಹೀಮ್ ಕೊತ್ವಾಲ ಎಂಬಾತನಿಗೆ ತಲುಪಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಮದುವೆ ಆಗದೇ ಮನನೊಂದು ಜೈಲ್ ವಾರ್ಡರ್ ಆತ್ಮಹತ್ಯೆ
ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.




