ರಾಜ್ಯದ ಚಳಿಗಾಲದ ಬೆಳಗಾವಿ ಅಧಿವೇಶನ ಸೋಮವಾರದಿಂದ ಸುವರ್ಣ ಸೌಧದಲ್ಲಿ ಆರಂಭಗೊಳ್ಳಲಿದೆ. ಒಟ್ಟು 10 ದಿನಗಳ ಕಾಲ ನಡೆಯಲಿರುವ ಅಧಿವೇಶನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಇಲ್ಲಿಯವರೆಗೆ ಬೆಳಗಾವಿಯಲ್ಲಿ 13 ಬಾರಿ ಉಭಯ ಸದನಗಳ ಅಧಿವೇಶನ ನಡೆದಿದ್ದು, ಇದಕ್ಕೆ ಒಟ್ಟು 170 ಕೋಟಿ ರೂ. ವೆಚ್ಚವಾಗಿದೆ. ಕಳೆದ ವರ್ಷ 15 ಕೋಟಿ ರೂ. ಖರ್ಚಾಗಿದ್ದರೆ, ಈ ಸಲದ 10 ದಿನಗಳ ಅಧಿವೇಶನಕ್ಕೆ 21 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ವಸತಿ ಭದ್ರತೆ ಸಿದ್ಧತೆ ಭಾರಿ
ಶಾಸಕರು ಹಾಗೂ ಅಧಿಕಾರಿಗಳ ವಸತಿಗಾಗಿ ನಗರದಲ್ಲಿನ 3,000ಕ್ಕೂ ಹೆಚ್ಚು ಕೊಠಡಿಗಳನ್ನು ಬುಕ್ ಮಾಡಲಾಗಿದೆ. ಇದಾದ ಜೊತೆ 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಸುವರ್ಣ ಸೌಧ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಜಾರಿಯಲ್ಲಿದೆ.
ಉತ್ತರ ಕರ್ನಾಟಕ ಚರ್ಚೆಗೆ ಕಡಿಮೆ ಆದ್ಯತೆ ಎಂಬ ಆರೋಪ
ಇಷ್ಟೊಂದು ವ್ಯವಸ್ಥೆ ಹಾಗೂ ವೆಚ್ಚ ಮಾಡಿದ್ದರೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದಿಲ್ಲ ಎಂಬ ಆರೋಪ ಪ್ರತಿವರ್ಷವೂ ಕೇಳಿ ಬರುತ್ತಿದೆ. ಸಾಮಾನ್ಯವಾಗಿ ಕೊನೆಯ ಎರಡು ದಿನಗಳು ಮಾತ್ರ ಈ ಭಾಗದ ವಿಷಯಗಳಿಗೆ ಮೀಸಲಾಗುತ್ತವೆ. ಉಳಿದ ದಿನಗಳಲ್ಲಿ ಇತರೆ ವಿಚಾರಗಳ ಚರ್ಚೆ, ಗಲಾಟೆ, ಗದ್ದಲಗಳೇ ಹೆಚ್ಚಿನದು ಎಂಬ ಟೀಕೆ ವ್ಯಕ್ತವಾಗಿದೆ.
ನೇಮಕಾತಿ ಬೇಡಿಕೆ ಪಂಚಮಸಾಲಿ ಸತ್ಯಾಗ್ರಹ
ಈ ಬಾರಿ ಅಧಿವೇಶನ ಅವಧಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳೂ ನಡೆಯಲಿವೆ. ಸರ್ಕಾರಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಯುವ ಸಮೂಹ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಇದಲ್ಲದೆ ಪಂಚಮಸಾಲಿ ಸಮಾಜ ಇನ್ನೊಮ್ಮೆ ಮೌನ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದು, ಸರ್ಕಾರದ ಪ್ರತಿಕ್ರಿಯೆ ಯಾವ ರೀತಿಯದ್ದಾಗಲಿದೆ ಎಂಬುದು ಗಮನ ಸೆಳೆದಿದೆ.





