ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಒಟ್ಟು ₹97.49 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಹುಂಡಿ ಎಣಿಕೆಯಲ್ಲಿ₹94,06,596 ನಗದು, ₹1,50,400 ಮೌಲ್ಯದ ಚಿನ್ನಾಭರಣ ಹಾಗೂ ₹1,92,860 ಮೌಲ್ಯದ ಬೆಳ್ಳಿ ಆಭರಣ ಸೇರಿವೆ.
ದೇವಸ್ಥಾನ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಸವದತ್ತಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ದೇವಸ್ಥಾನದ ಪಂಡಿತ ಯಡೂರಯ್ಯ ಅವರ ಪೂಜೆಯೊಂದಿಗೆ ಶುಕ್ರವಾರ ಹಾಗೂ ಶನಿವಾರ ಹುಂಡಿ ಎಣಿಕೆ ನಡೆಯಿತು.
ಸಿಸಿಟಿವಿ ಕ್ಯಾಮೆರಾ ಚಿತ್ರೀಕರಣದ ನಡುವೆ ದೇವಸ್ಥಾನದ 60 ಸಿಬ್ಬಂದಿ, ಕೆನರಾ ಬ್ಯಾಂಕಿನ 10 ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಹಣ ಎಣಿಕೆಯಲ್ಲಿ ಪಾಲ್ಗೊಂಡರು ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಬಸ್ ಹತ್ತುವ ವೇಳೆ ಚಿನ್ನಾಭರಣ ಕಳವು: ಆರೋಪಿ ಬಂಧನ, ₹3.64 ಲಕ್ಷ ಮೌಲ್ಯದ ಆಭರಣ ವಶ
ಈ ಸಂದರ್ಭದಲ್ಲಿ ಶೀತಲ ಕಡಟ್ಟಿ, ಅಲ್ಲಮಪ್ರಭು ಪ್ರಭುನವರ, ಆರ್.ಎಸ್. ಸವದತ್ತಿ, ಸಿ.ಎನ್. ಕುಲಕರ್ಣಿ, ಜಗದೀಶ ರೇವಣ್ಣವರ, ಪ್ರಭು ಹಂಜಗಿ, ಸದಾನಂದ ಈಟಿ, ವಿ.ಪಿ. ಸೋನ್ನದ, ವಿ.ಆರ್. ನೀಲಗುಂದ ಹಾಗೂ ಕೆನರಾ ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ ನವಲಕರ ಉಪಸ್ಥಿತರಿದ್ದರು.




