ಜಾತಿ ಮುಕ್ತ ಭಾರತ ನಿರ್ಮಾಣವು ಪ್ರತಿಯೊಬ್ಬರ ಹೊಣೆಗಾರಿಕೆ. ಬಿ.ಆರ್. ಅಂಬೇಡ್ಕರ್ ಮತ್ತು ಬಸವಣ್ಣ ಅವರ ವಿಚಾರಧಾರೆಗಳು ಹಾಗೂ ನೈತಿಕ ಮೌಲ್ಯಗಳು ಪ್ರತಿ ಮನೆಗೂ ತಲುಪಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಬಿ.ಆರ್. ಅಂಬೇಡ್ಕರ್’ ವಿಷಯದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜಕಾರ್ಯ ವಿಭಾಗ, ಸಮಾಜಕಲ್ಯಾಣ ಇಲಾಖೆಯ ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
‘ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಟ್ಟು ತಾರತಮ್ಯ ನಿರ್ಮೂಲನೆಗೆ ಶ್ರಮಿಸಿದ ಮಹನೀಯರನ್ನು ಹೊಸ ಪೀಳಿಗೆಗೆ ಪರಿಚಯಿಸುವುದು ಇಂದಿನ ಅಗತ್ಯ. “ನಾವೆಲ್ಲರೂ ಒಂದೇ” ಎಂಬ ಸಂದೇಶವನ್ನು ಶಾಲಾ ಹಂತದಲ್ಲೇ ಮಕ್ಕಳ ಮನದಲ್ಲಿ ಬಿತ್ತಬೇಕು’ ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ. ಇಂತಹ ವೈಚಾರಿಕ ಕಾರ್ಯಕ್ರಮಗಳು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪ್ರತಿವರ್ಷ ಜರುಗಬೇಕು’ ಎಂದರು.
ಚಿಂತಕ ರಾಜಪ್ಪ ದಳವಾಯಿ ಮಾತನಾಡಿ, ‘ವೈಚಾರಿಕ ತಳಹದಿಯಲ್ಲಿ ರೂಪುಗೊಂಡಿರುವ ನಮ್ಮ ಸಂವಿಧಾನವು ಸಾಮಾಜಿಕ ಪ್ರಜ್ಞೆಯ ಪ್ರತೀಕ. ನಾವು ಜಾತಿ ಚೌಕಟ್ಟು ಮೀರಿ ಬೆಳೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜೆ. ಸೋಮಶೇಖರ, ‘ಜ್ಞಾನಪೂರ್ಣ ಸಮಾಜ ನಿರ್ಮಾಣ ಇಂದಿನ ಅವಶ್ಯಕತೆ’ ಎಂದು ಹೇಳಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಗಾಂಧಿನಗರದಲ್ಲಿ ಮಹಿಳೆ ಮೇಲೆ ಕ್ರೂರ ಹಲ್ಲೆ : ಮಾನವೀಯತೆಯೇ ತಲೆ ತಗ್ಗಿಸುವ ಘಟನೆ
ಶಾಸಕ ಆಸಿಫ್ ಸೇರ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಸ್ವಾಗತಿಸಿದರು. ಕುಲಸಚಿವ ಸಂತೋಷ ಕಾಮಗೌಡ ವಂದಿಸಿದರು.




