ದೇಶವು ಅಸಮಾನತೆ ಮತ್ತು ಕೋಮು ದ್ವೇಷದತ್ತ ವಾಲುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದ ಭಾರತ ಎಂಬ ಗ್ರಂಥದ ಜನಾರ್ಪಣೆ ಕಾಡುತ್ತಿರುವ ರೋಗಕ್ಕೆ ದೊರೆತ ಔಷಧದಂತಿದೆ ಎಂದು ಹಿರಿಯ ಪರಿಸರವಾದಿ ಶಿವಾಜಿ ಕಾಗಣೀಕರ್ ಹೇಳಿದರು.
ಬೆಳಗಾವಿ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಕೃತಿ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬರಗೂರು ಎಂದರೆ ಸೌಹಾರ್ದತೆಯ ಪ್ರತಿರೂಪ. ಸಹಮಾನವರಲ್ಲಿ ಸೌಹಾರ್ದತೆ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಇಂತಹ ಸಂದರ್ಭದಲ್ಲಿ ಈ ಕೃತಿ ಸಮಾನತೆ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಕೈದೀವಿಗೆಯಾಗಿ ಕೆಲಸ ಮಾಡಬಲ್ಲದು ಎಂದರು.
ಪುಸ್ತಕ ಓದುವುದರಲ್ಲೇ ನಿಲ್ಲದೆ ಅದರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆ ನೆಲೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಆಶಯ ನುಡಿಗಳನ್ನಾಡಿ, ಸಾಹಿತಿಗಳು ಸಾಮಾಜಿಕ ಹೊಣೆಗಾರಿಕೆಯಿಂದ ಬರೆಯಬೇಕು. ಜನರಿಂದ ದೂರವಿರುವ ಬರಹಗಾರ ಎಂದಿಗೂ ಬೆಳೆಯಲಾರ. ಜನರ ನೋವಿಗೆ ಮಿಡಿಯುವ ಬರಹಗಾರರು ಮಾತ್ರ ಸಮಾಜಕ್ಕೆ ದಿಕ್ಕು ತೋರಬಲ್ಲರು. ಅದಕ್ಕಾಗಿಯೇ ಬರಗೂರು ಅವರು ಪುಸ್ತಕ ಬಿಡುಗಡೆಯನ್ನು ಜನಾರ್ಪಣೆ ಎಂದು ಕರೆಯುತ್ತಾರೆ ಎಂದು ಹೇಳಿದರು.
ಕವಯಿತ್ರಿ ಕವಿತಾ ಕುಸುಗಲ್ ಕೃತಿ ಪರಿಚಯ ಮಾಡಿದರು. ಹಿರಿಯ ಸಾಹಿತಿ ಸರಜೂ ಕಾಟ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯಸ್ಥೆ ಚಿನ್ನು ತಳವಾರ್, ಜಮಾತೆ ಇಸ್ಲಾಮಿ ಹಿಂದ್ನ ಮೊಹಮ್ಮದ್ ಯಾಸಿನ್ ಮುಕಾನ್ದಾರ್, ದಲಿತ ಸಂಘಟನೆಯ ಸಿದ್ದಪ್ಪ ಕಾಂಬಳೆ, ಕನ್ನಡ ಚಳುವಳಿಯ ಅಶೋಕ ಚಂದರಗಿ, ರೈತ ಚಳುವಳಿಯ ಸಿದಗೌಡ ಮೋದಗಿ, ಸಿಐಟಿಯು ಸಂಘಟನೆಯ ಮೀನಾಕ್ಷಿ ದಫಡೆ, ಲೇಖಕಿಯರ ಸಂಘದ ಕೆ.ಆರ್. ಸಿದ್ದಗಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆರಂಭದಲ್ಲಿ ಸರಳಾ ಸಾತ್ಪುತೆ ಸೌಹಾರ್ದ ಗೀತೆಗಳನ್ನು ಹಾಡಿದರು. ರವಿ ಕೋಟಾರಗಸ್ತಿ ಸ್ವಾಗತಿಸಿದರು. ನದೀಮ್ ಸನದಿ ವಂದಿಸಿದರು.




