ಭರತ ಹುಣ್ಣಿಮೆಯ ನಿಮಿತ್ತ ಸವದತ್ತಿಯ ಶ್ರೀ ರೆಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದ ಎತ್ತಿನ ಚಕ್ಕಡಿಯೊಂದು ರಸ್ತೆ ಪಕ್ಕದ ಗುಂಡಿಗೆ ಬಿದ್ದು ಎತ್ತುಗಳಿಗೆ ಗಾಯವಾದ ಘಟನೆ ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪ ನಡೆದಿದೆ.
ಭರತ ಹುಣ್ಣಿಮೆಯ ಹಿನ್ನೆಲೆಯಲ್ಲಿ ಯಲ್ಲಮ್ಮನ ಗುಡ್ಡಕ್ಕೆ ನೂರಾರು ಎತ್ತಿನ ಚಕ್ಕಡಿಗಳು ತೆರಳುವ ಹಾಗೂ ಮರಳುವ ದೃಶ್ಯ ಅತ್ಯಂತ ಆಕರ್ಷಕವಾಗಿರುತ್ತದೆ. ಆದರೆ ಈ ಸಂದರ್ಭದಲ್ಲಿ ಕೆಲ ಚಕ್ಕಡಿ ಮಾಲೀಕರ ಅಜಾಗರೂಕತೆ ಮೂಕ ಪ್ರಾಣಿಗಳಿಗೆ ತೊಂದರೆಯಾಗುತ್ತಿರುವುದು ಕಂಡುಬರುತ್ತಿದೆ.
ಶ್ರೀ ರೆಣುಕಾ ಯಲ್ಲಮ್ಮನ ಗುಡ್ಡದಿಂದ ಓಬಳಾಪೂರದ ಕಡೆಗೆ ತೆರಳುತ್ತಿದ್ದ ಚಕ್ಕಡಿಯನ್ನು ಅತಿವೇಗವಾಗಿ ಓಡಿಸಲಾಗಿತ್ತು ಎನ್ನಲಾಗಿದೆ. ಎತ್ತುಗಳನ್ನು ವೇಗವಾಗಿ ಓಡಿಸಲು ಬಾಲಕೋಲಿನಿಂದ ಹೊಡೆದ ಪರಿಣಾಮ ನೋವು ತಾಳಲಾರದೆ ಎತ್ತುಗಳು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿವೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇಂತಹ ಘಟನೆಗಳು ಮರುಕಳಿಸದಂತೆ ಚಕ್ಕಡಿಗಳನ್ನು ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ಓಡಿಸಬೇಕು. ಮೂಕ ಪ್ರಾಣಿಗಳ ಮೇಲಿನ ಕಾಳಜಿ ಅಗತ್ಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




