ವಾಲ್ಮೀಕಿ ಸಮುದಾಯಕ್ಕೆ ಅವಹೇಳನಕಾರಿ ಪದಗಳನ್ನು ಬಳಸಿ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಬೆಳಗಾವಿ ನಗರದಲ್ಲಿ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಮತದಾನದ ವೇಳೆ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದಾಗ, ಜಾರಕಿಹೊಳಿ ಸಹೋದರರನ್ನು ಟೀಕಿಸುವ ಸಂದರ್ಭ ಕತ್ತಿ ಅವರು ವಾಲ್ಮೀಕಿ ಸಮುದಾಯದ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎಂಬುದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಆಧಾರವನ್ನಾಗಿ ಮಾಡಿಕೊಂಡು ಸಮಾಜದ ಮುಖಂಡ ರಾಜಶೇಖರ ತಳವಾರ ಕ್ಯಾಂಪ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಷಯ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಾಲ್ಮೀಕಿ ಸಮಾಜದ ಸಂಘಟನೆಗಳು ಸೋಮವಾರ (ಅ.20) ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ.
ಹೇಳಿಕೆ ತಿರುಚಲಾಗಿದೆ: ರಮೇಶ ಕತ್ತಿ
ಆರೋಪವನ್ನು ಖಂಡಿಸಿದ ರಮೇಶ ಕತ್ತಿ ಅವರು ಸ್ಪಷ್ಟನೆ ನೀಡುತ್ತಾ, “ಬಿಡಿಸಿಸಿ ಚುನಾವಣೆಯಲ್ಲಿ ಗೆದ್ದ ನಂತರ ಅಭಿಮಾನಿಗಳು ಡಾಲ್ಟಿ ಸಂಗೀತ ಹಚ್ಚಿ ಮೆರವಣಿಗೆ ಮಾಡಲು ಒತ್ತಾಯಿಸಿದರು. ಆಗ ನಾನು ‘ಬ್ಯಾಡರೋ’ (ಬೇಡ) ಎಂದೆ. ಈ ಹೇಳಿಕೆಯನ್ನು ತಿರುಚಿ ಜಾತಿ ನಿಂದನೆ ಎಂದು ವೈರಲ್ ಮಾಡಿದ್ದಾರೆ,” ಎಂದರು.
“ನನ್ನ ಗೆಲುವು ಸಹಿಸಲಾಗದವರು ಉದ್ದೇಶಪೂರ್ವಕವಾಗಿ ನನ್ನನ್ನು ವಾಲ್ಮೀಕಿ ಸಮುದಾಯದ ವಿರೋಧಿ ಎಂಬಂತೆ ಬಿಂಬಿಸಿದ್ದಾರೆ. ನಾನು ಯಾರನ್ನೂ ಉದ್ದೇಶಿಸಿ ಮಾತನಾಡಿಲ್ಲ. ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ,” ಎಂದು ಕತ್ತಿ ಸ್ಪಷ್ಟಪಡಿಸಿದರು.





