ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ, ₹11.25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವಡ್ಡರವಾಡಿ ನಿವಾಸಿಗಳಾದ ಆರತಿ ಅಲಿಯಾಸ್ ಪರೀದಾ ಚೌಗುಲೆ (26) ಹಾಗೂ ಸರಸ್ವತಿ ರೋಖಡೆ (45) ಬಂಧಿತ ಆರೋಪಿಗಳು. 2024ರಲ್ಲಿ ಇವರು ನಾಲ್ಕು ಬಾರಿ ಸರಗಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತನಿಖಾ ತಂಡದ ನೇತೃತ್ವ ವಹಿಸಿದ್ದ ಮಾರ್ಕೆಟ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ತಿಳಿಸಿದ್ದಾರೆ.
ಬಂಧಿತ ಮಹಿಳೆಯರು ಕದ್ದ ಚಿನ್ನಾಭರಣಗಳನ್ನು ಆರತಿ ಚೌಗುಲೆ ಅವರ ಪತಿ ಶಿವಾ ಚೌಗುಲೆ ಎಂಬಾತನಿಗೆ ನೀಡುತ್ತಿದ್ದರು. ಆತ ಆಭರಣಗಳನ್ನು ಕರಗಿಸಿ ಬೆಳಗಾವಿಯ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಅಡವಿಟ್ಟು ಹಣ ಪಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಫೈನಾನ್ಸ್ ಸಂಸ್ಥೆಯಿಂದ 176 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದಿರಾ ? ವಂಟಮೂರಿ ತೀರ್ಪೊಂದು ಸಾಕೇ? ತೆರೆಮರೆಗೆ ಸರಿದ ಪ್ರಕರಣಗಳಿಗೆ ನ್ಯಾಯ ಯಾವಾಗ?
ಪ್ರಕರಣದ ಪ್ರಮುಖ ಆರೋಪಿ ಶಿವಾ ಚೌಗುಲೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.




