ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಸೀಮಿತರಾಗಿರಲಿಲ್ಲ; ಎಲ್ಲ ವರ್ಗಗಳ ಪ್ರೀತಿಗೆ ಪಾತ್ರರಾದ ಮಹಾನ್ ನಾಯಕರು. ಅವರು ಇಡೀ ದೇಶದ ಆಸ್ತಿ, ಅವರ ತತ್ವಗಳು ಎಲ್ಲರಿಗೂ ಆದರ್ಶವಾಗಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ನಗರದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಕೇವಲ ವೀರ ಯೋಧ ಮಾತ್ರವಲ್ಲ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಶ್ರೇಷ್ಠ ಆಡಳಿತಗಾರರಾಗಿದ್ದರು ಎಂದರು.
ಸ್ವರಾಜ್ಯ ಪರಿಕಲ್ಪನೆಯಡಿ ಧರ್ಮ ಸಹಿಷ್ಣುತೆ, ಜನಕಲ್ಯಾಣ ಮತ್ತು ನ್ಯಾಯಯುತ ಆಡಳಿತವೇ ಅವರ ಆಡಳಿತದ ಮೂಲ ತತ್ವಗಳಾಗಿದ್ದವು ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಹೊದಿಗೆರೆಯಲ್ಲಿ ಇರುವ ಶಹಾಜಿ ಮಹಾರಾಜರ ಸಮಾಧಿ ಸ್ಮಾರಕಕ್ಕಾಗಿ 5 ಕೋಟಿ ರೂ. ಕಾಯ್ದಿರಿಸಲಾಗಿದ್ದು, ಬೆಳಗಾವಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.





