ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ನೇಮಕಾತಿ ಪತ್ರ ವಿತರಣೆ ಸಮಾರಂಭದಲ್ಲಿ ವೈದ್ಯೆ ನುಸ್ತುತ್ ಪರವಿನ್ ಅವರ ಮುಖದ ಮೇಲಿದ್ದ ಹಿಜಾಬ್ ಅನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಜಗ್ಗಿದ ಘಟನೆಯನ್ನು ಖಂಡಿಸಿ, ಇನ್ಸಾಫ್ ಕಮಿಟಿ ಹಾಗೂ ವಿವಿಧ ಸಂಘಟನೆಗಳು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಹಿಜಾಬ್ ಕೇವಲ ಬಟ್ಟೆಯ ತುಂಡಲ್ಲ; ಅದು ನಂಬಿಕೆ, ಗುರುತು ಹಾಗೂ ವೈಯಕ್ತಿಕ ಆಯ್ಕೆ. ಮಹಿಳೆ ಏನು ಧರಿಸಬೇಕು ಎಂಬ ಹಕ್ಕಿನಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದು ಸಂವಿಧಾನದ ಕಲಂ 14, 19, 21 ಮತ್ತು 25ರ ಉಲ್ಲಂಘನೆ ಎಂದು ತಿಳಿಸಲಾಗಿದೆ. ಈ ವಿಷಯ ಅರಿತಿರುವ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಯಿಂದ ನಡೆದಿರುವ ಈ ವರ್ತನೆ ಅಸಭ್ಯ ಹಾಗೂ ಗಂಭೀರ ತಪ್ಪು ಎಂದು ಆರೋಪಿಸಲಾಗಿದೆ.
ಈ ಅವಮಾನಕರ ಕೃತ್ಯಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಘಟನೆಗಳು ಒತ್ತಾಯಿಸಿವೆ.
ಒಂದು ಕಾಲದಲ್ಲಿ ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದ ನಿತಿಶ್ ಕುಮಾರ್ ಈಗ ಬಹುಸಂಖ್ಯಾತವಾದ ಹಾಗೂ ಹೊರಗಿಡುವ ಕಾರ್ಯಸೂಚಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆಡಳಿತದ ನೆಪದಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸುವುದು ಸಂವಿಧಾನಬಾಹಿರ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
ಈ ಪ್ರಕರಣದ ಕುರಿತು ಬಿಹಾರ ಸರ್ಕಾರದ ಸಚಿವ ಸಂಜಯ ನಿಶಾದ್ ಹಾಗೂ ಬಿಜೆಪಿಯ ನಾಯಕರ ಹೇಳಿಕೆಗಳೂ ಅತ್ಯಂತ ಆಕ್ಷೇಪಾರ್ಹವಾಗಿವೆ ಎಂದು ಮನವಿಯಲ್ಲಿ ಟೀಕಿಸಲಾಗಿದೆ.
ನಿತೀಶ್ ಕುಮಾರ್ ಅವರ ಹಿಂದಿನ ವಿವಾದಾತ್ಮಕ ವರ್ತನೆಗಳು ಸಾರ್ವಜನಿಕ ವಲಯದಲ್ಲಿ ಈಗಾಗಲೇ ಪ್ರಶ್ನೆಗಳನ್ನು ಎಬ್ಬಿಸಿವೆ ಎಂದು ಸಂಘಟನೆಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಜಿ.ಎಮ್. ಜೈನೆಖಾನ, ಮಹ್ಮದ್ ಶಫಿ ಬೆಣ್ಣೆ, ಶಬೀರ್ ಅಹ್ಮದ್ ಖಾಡ, ಬಿ.ಆರ್. ದೊಡ್ಡಮನಿ, ರಾಜಶೇಖರ ಶೆಲವಡಿ, ಎಸ್.ಬಿ. ಚಿಕ್ಕನರಗುಂದ, ಫೈರೋಜ್ ಪಠಾಣ, ಶಶಿಕಾಂತ ನೆಲ್ಲೂರ, ಸುಲೇಮಾನ ಫೆಂಡಾರಿ, ಎಂ.ಕೆ. ಯಾದವಾಡ, ಸುಭಾಷ್ ಘೋಡಕೆ ಸೇರಿದಂತೆ ಇನ್ಸಾಫ್ ಕಮಿಟಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.





