ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ವೃದ್ಧ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು ₹15 ಕೋಟಿ ಹಣ ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ ವಂಚಕರು, “ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದೆ” ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ತನಿಖೆ ನಡೆಯುತ್ತಿದೆ ಎಂದು ಹೇಳಿ, ಖಾತೆಯಲ್ಲಿರುವ ಹಣವನ್ನು ಸುರಕ್ಷಿತ ಖಾತೆಗೆ ವರ್ಗಾಯಿಸಲು ಸೂಚಿಸಿದ್ದಾರೆ. ತನಿಖೆ ಬಳಿಕ ಹಣವನ್ನು ಮರಳಿಸಲಾಗುವುದು ಎಂದು ನಂಬಿಕೆ ಮೂಡಿಸಿದ್ದಾರೆ.
ವಂಚಕರ ಮಾತಿಗೆ ಮರುಳಾದ ಉದ್ಯಮಿ, ಹಂತ ಹಂತವಾಗಿ ಒಟ್ಟು ₹15 ಕೋಟಿ ಹಣವನ್ನು ಅವರ ಖಾತೆಗೆ ವರ್ಗಾಯಿಸಿದ್ದಾರೆ. ನಂತರ ವಂಚಕರು ಸಂಪರ್ಕಕ್ಕೆ ಸಿಗದೇ ಇದ್ದಾಗ ಮೋಸವಾಗಿರುವುದು ಬೆಳಕಿಗೆ ಬಂದಿದೆ.
ಮಾ.18ರಂದು ಈ ಘಟನೆ ನಡೆದಿದ್ದು, ಸಂತ್ರಸ್ತರು ಬೆಳಗಾವಿ ನಗರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ ₹15 ಕೋಟಿಯಲ್ಲಿ ₹90 ಲಕ್ಷವನ್ನು ತಡೆದಿದ್ದಾರೆ.
ಸೈಬರ್ ವಂಚಕರ ಬಂಧನಕ್ಕಾಗಿ ಪೊಲೀಸ್ ಕಮಿಷನರ್ ವಿಶೇಷ ತಂಡ ರಚಿಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ರೈತರಿಗೆ ಕಬ್ಬಿನ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆಗಳ ಮೇಲೆ ಸರ್ಕಾರಕ್ಕೆ ಯಾಕಷ್ಟು ಪ್ರೀತಿ?
ಸಾರ್ವಜನಿಕರಿಗೆ ಎಚ್ಚರಿಕೆ:
‘ಡಿಜಿಟಲ್ ಅರೆಸ್ಟ್’, ಮನಿ ಲಾಂಡ್ರಿಂಗ್ ಹೆಸರಿನಲ್ಲಿ ಕರೆ ಮಾಡುವವರನ್ನು ನಂಬಬೇಡಿ. ಯಾವುದೇ ಅಧಿಕಾರಿಗಳು ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲು ಸೂಚಿಸುವುದಿಲ್ಲ. ಅನುಮಾನಾಸ್ಪದ ಕರೆ ಬಂದರೆ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.




