ಬೆಳಗಾವಿಯ ಈಫಾ ಹೋಟೆಲ್ ಹತ್ತಿರ ಶನಿವಾರ ಬೆಳಿಗ್ಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯ ಹಿನ್ನೆಲೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಜಾರಕಿಹೊಳಿ ಹಾಗೂ ಸವದಿ ಬಣದ ಬೆಂಬಲಿಗರು ಪರಸ್ಪರ ವಾಗ್ವಾದ ನಡೆಸಿ ಬಳಿಕ ಹೊಡೆದಾಡಿಕೊಂಡ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಮತದಾನಕ್ಕೆ ಅಗತ್ಯವಾದ ಡೆಲಿಗೇಷನ್ ಪಾರ್ಮ್ಗಳನ್ನು ತಡೆದಿದ್ದಾರೆ ಎಂಬ ಆರೋಪದಿಂದ ಗಲಾಟೆ ಉಂಟಾಗಿದೆ. ಸುಮಾರು 40 ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಿಲ್ಲ ಎಂಬ ಸವದಿ ಬಣದ ಬೆಂಬಲಿಗರ ಆಕ್ರೋಶ ವ್ಯಕ್ತವಾಗಿದೆ.
ಜಾರಕಿಹೊಳಿ ಪ್ಯಾನಲ್ನ ಅಭ್ಯರ್ಥಿ ಅಪ್ಪಾಸಾಹೇಬ್ ಕುಲಗೋಡೆ ವಿರುದ್ಧ ಅಕ್ರಮಗಳ ಆರೋಪ ಹೊರಹೊಮ್ಮಿದೆ. ಇದೇ ವೇಳೆ ರಾಯಬಾಗ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಬಸನಗೌಡ ಆಸಂಗಿ ಬೆಂಬಲಿಗರು ಈಫಾ ಹೋಟೆಲ್ ಒಳಗೆ ನುಗ್ಗಿದ ಪರಿಣಾಮ ಪರಿಸ್ಥಿತಿ ಉಗ್ರಗೊಂಡಿದೆ. ಆಸಂಗಿ ಅವರು ಸವದಿ–ಕತ್ತಿ ಬಣದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಗಲಾಟೆಯ ಮಾಹಿತಿ ತಿಳಿದಂತೆಯೇ ಡಿಸಿಪಿ ನಾರಾಯಣ ಬರಮನಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೊಲೀಸರು ಹೋಟೆಲ್ ಆವರಣ ಹಾಗೂ ಸುತ್ತಮುತ್ತ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಚುನಾವಣಾಧಿಕಾರಿಗೆ ದೂರು ನೀಡುವಂತೆ ಸವದಿ ಬಣದ ಬೆಂಬಲಿಗರನ್ನು ಅಧಿಕಾರಿಗಳು ಮನವೊಲಿಸುತ್ತಿದ್ದು, ಸ್ಥಳದಲ್ಲಿ ಇನ್ನೂ ಬಿಗುವು ಮುಂದುವರಿದಿದೆ.





