ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯು ಇಂದು ನಡೆಯುತ್ತಿದ್ದು, ರಾಮದುರ್ಗ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮಲ್ಲಣ್ಣ ಯಾದವಾಡ ಅವರಿಗೆ ಶಾಸಕ ಅಶೋಕ ಪಟ್ಟಣ ಅವರು ಬೆಂಬಲ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬೆಂಬಲದಿಂದ ಮಲ್ಲಣ್ಣ ಯಾದವಾಡ ಅವರ ಗೆಲುವು ಬಹುತೇಕ ಖಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಸಲ್ಲಿಸಿದ್ದ ಶಾಸಕ ಅಶೋಕ ಪಟ್ಟಣ ಅವರು ನಾಮಪತ್ರ ವಾಪಸ್ ಪಡೆಯುವ ಮೂಲಕ ಕುತೂಹಲ ಮೂಡಿಸಿದ್ದರು. ನಂತರ ಶಾಸಕರ ಬೆಂಬಲ ಯಾರಿಗೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಇಂದು ಅದಕ್ಕೆ ತೆರೆ ಬಿದ್ದಿದ್ದು, ಅಶೋಕ ಪಟ್ಟಣ ಅವರು ಮಲ್ಲಣ್ಣ ಯಾದವಾಡ ಪರ ನಿಂತು ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ಶಂಕರ ಢವಣ ಅವರಿಗೆ ದೊಡ್ಡ ಸವಾಲು ಎಸೆದಿದ್ದಾರೆ.
“ಮಲ್ಲಣ್ಣ ಯಾದವಾಡ ನನ್ನ ಶತ್ರುಗಳಲ್ಲ. ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ. ತಾಲೂಕಿನಲ್ಲಿ ಹಣದ ಪ್ರಭಾವ ಕಡಿಮೆ ಮಾಡಬೇಕಿದೆ. ಕೆಲವು ಜನರು ಚುನಾವಣೆಯಲ್ಲಿ ಹಣ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾನು ಮಲ್ಲಣ್ಣ ಯಾದವಾಡಗೆ ಬೆಂಬಲ ನೀಡಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ನಾವು ವಿಭಿನ್ನ ಪಕ್ಷಗಳಲ್ಲಿ ಇದ್ದರೂ ಈ ಚುನಾವಣೆಗೆ ಅದರ ಸಂಬಂಧ ಇಲ್ಲ,” ಎಂದು ಶಾಸಕ ಅಶೋಕ ಪಟ್ಟಣ ಸ್ಪಷ್ಟಪಡಿಸಿದರು.





