ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದಲ್ಲಿ ಸಹಕಾರಿ ಸಂಘಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಬ್ಯಾಂಕ್ ಸಾಧನೆ ಕುರಿತು ಮಹತ್ವದ ಮಾಹಿತಿ ನೀಡಿದರು.
ಸತೀಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ತಾವು ಅಧ್ಯಕ್ಷರಾದ ಬಳಿಕ ಕೇವಲ ಮೂರು ತಿಂಗಳಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ನಲ್ಲಿ 520 ಕೋಟಿ ರೂ.ಗಳಷ್ಟು ಠೇವಣಿ ಹೆಚ್ಚಳವಾಗಿದೆ ಎಂದು ಹೇಳಿದರು. ಪ್ರಸ್ತುತ ಬ್ಯಾಂಕ್ನಲ್ಲಿ ಒಟ್ಟು 5601 ಕೋಟಿ ರೂ.ಗಳ ಡಿಪಾಜಿಟ್ ಸಂಗ್ರಹವಾಗಿದೆ ಎಂದು ತಿಳಿಸಿದರು.
ರೈತರಿಗೆ ಬ್ಯಾಂಕ್ನಿಂದ ಮೂರು ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದ ಅವರು, ಕೃಷಿ ಪತ್ತಿನ ಸಂಘಗಳ ಮೂಲಕ 0% ಬಡ್ಡಿದರದಲ್ಲಿ ಸಾಲ, 3% ಬಡ್ಡಿದರದಲ್ಲಿ ಟ್ರ್ಯಾಕ್ಟರ್ ಸಾಲ ಹಾಗೂ 3% ಬಡ್ಡಿದರದಲ್ಲಿ ಪೈಪ್ಲೈನ್ ಸಾಲ ನೀಡಲಾಗುತ್ತಿದೆ ಎಂದರು. ಜೊತೆಗೆ ಪ್ರತಿ ಎಕರೆಗೆ 40 ಸಾವಿರ ರೂ.ಗಳವರೆಗೆ ಸಾಲ ನೀಡುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳಿದರು.
ಸಹಕಾರಿ ಸಂಘಗಳ ಸಿಬ್ಬಂದಿಗಳ ವೇತನ ಹೆಚ್ಚಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ರಾಮದುರ್ಗ ತಾಲೂಕಿನ ಯಾವುದೇ ಸಂಘ-ಸಂಸ್ಥೆಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ಸರಳೀಕರಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸುದ್ದಿ ಓದಿದ್ದಿರಾ ? ರಾಮದುರ್ಗದಲ್ಲಿ ₹33 ಕೋಟಿ ವೆಚ್ಚದ ಆಸ್ಪತ್ರೆಗೆ ಶಂಕುಸ್ಥಾಪನೆ, ಜಿಲ್ಲೆಗೆ 330 ಕೋಟಿ ಕೊಡುಗೆ: ಸಚಿವ ದಿನೇಶ ಗುಂಡುರಾವ
ಈ ಸಂದರ್ಭದಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ಪಿ.ಎಫ್. ಪಾಟೀಲ, ಕೆ.ವಿ. ಪಾಟೀಲ ಸೇರಿದಂತೆ ಅನೇಕ ಮುಖಂಡರು, ಸಹಕಾರಿ ಸಂಘಗಳ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




