ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ) ಸವದತ್ತಿಯು ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿದ ದಿವಂಗತ ನಾಟ್ಯಭೂಷಣ ಏಣಗಿ ಬಾಳಪ್ಪ ಅವರ ಸ್ಮರಣಾರ್ಥವಾಗಿ ಮೂರು ದಿನಗಳ ಸ್ಮರಣೋತ್ಸವ ನಾಟಕೋತ್ಸವವನ್ನು ಬೆಳಗಾವಿಯ ಕನ್ನಡ ಭವನದಲ್ಲಿ ಆಯೋಜಿಸಿದೆ.
ಈ ನಾಟಕೋತ್ಸವವು ನವೆಂಬರ್ 7ರಿಂದ 9ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ನೆಹರು ನಗರದ ರಾಮದೇವ್ ಹೋಟೆಲ್ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದ್ದು, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಸೃಷ್ಟಿ ಕಲಾತಂಡ ಹಾಗೂ ಕನ್ನಡ ಭವನದ ಸಹಯೋಗದಲ್ಲಿ ನಡೆಯಲಿದೆ.
ರಂಗಭೂಮಿಯ ದಿವಂಗತ ದಿಗ್ಗಜರಾದ ಸಾಹಿತಿ ಎಸ್.ಎಲ್. ಭೈರಪ್ಪ, ರಂಗಕರ್ಮಿಗಳು ಯಶವಂತ ಸರದೇಶಪಾಂಡೆ, ರಾಜು ತಾಳಿಕೋಟಿ, ಡಿ. ಹಣುಮಕ್ಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಅನ್ನಪೂರ್ಣ ಅಶೋಕ ಮಳಗಲಿ ಇವರಿಗೆ ಈ ಉತ್ಸವವನ್ನು ಅರ್ಪಿಸಲಾಗಿದೆ.
ನವೆಂಬರ್ 7ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿಗಳು ನೀಲಗಂಗಾ ಚರಂತಿಮಠ, ಡಾ. ಗುರುದೇವಿ ಹುಲೆಪ್ಪನವರಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್. ಚನ್ನೂರ, ಸುಭಾಸ್ ಏಣಗಿ, ಸರ್ಜೂ ಕಾಟ್ಕರ್, ವಿದ್ಯಾವತಿ ಭಜಂತ್ರಿ, ಮಂಗಲಾ ಮೆಟಗುಡ್ಡ, ಶೈಲಜಾ ಭಿಂಗೆ, ಅರವಿಂದ ಕುಲಕರ್ಣಿ, ಸವಿತಾ ಭೈರಪ್ಪ, ರತ್ನಪ್ರಭಾ ಬೆಲ್ಲದ ಹಾಗೂ ವಿದ್ಯಾ ಗೌಡರ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಝಕೀರ ನದಾಫ ಅವರ ‘ನೆಲಮುಗಿಲು’ ಮತ್ತು ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕ ಕೃತಿಗಳ ಲೋಕಾರ್ಪಣೆ ನಡೆಯಲಿದೆ. ನಂತರ ರಂಗಸಂಪದ ಬೆಳಗಾವಿ ಅವರಿಂದ ಸಂಧ್ಯಾ ಎಸ್. ರಚಿಸಿದ, ಸವಿತಾ ಭೈರಪ್ಪ ನಿರ್ದೇಶನದ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನಗೊಳ್ಳಲಿದೆ.
ನವೆಂಬರ್ 8ರಂದು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಅವರ ರಚನೆ ಮತ್ತು ನಿರ್ದೇಶನದ ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕ ಪ್ರದರ್ಶನಗೊಳ್ಳಲಿದೆ.
ನವೆಂಬರ್ 9ರಂದು ಸಮಾರೋಪ ಸಮಾರಂಭದಲ್ಲಿ ಎಲ್.ಎಸ್. ಶಾಸ್ತ್ರಿ, ಯ.ರು. ಪಾಟೀಲ, ಬಸವರಾಜ ರೊಟ್ಟಿ, ಮಧುಕರ ಗುಂಡೇನಟ್ಟಿ, ರವಿ ಕೊಟಾರಗಸ್ತಿ, ಆನಂದ ಪುರಾಣಿಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಅದಾದ ನಂತರ ಅದೇ ಸಂಘಟನೆಯಿಂದ ಝಕೀರ ನದಾಫ ನಿರ್ದೇಶನದ ‘ನೆಲಮುಗಿಲು’ ನಾಟಕ ಪ್ರದರ್ಶನಗೊಳ್ಳಲಿದೆ.
ಸಾಂಸ್ಕೃತಿಕ ವೈಭವದಿಂದ ಕೂಡಿದ ಈ ನಾಟಕೋತ್ಸವಕ್ಕೆ ರಂಗಭೂಮಿ ಕಲಾಭಿಮಾನಿಗಳನ್ನು ಸಂಘಟನೆಯು ಆಹ್ವಾನಿಸಿದೆ.





