ಗೋವಿನ ಜೋಳ ಮತ್ತು ಹೆಸರು ಬೆಳೆ ಖರೀದಿಯಲ್ಲಿ ನಡೆಯುತ್ತಿರುವ ತಾರತಮ್ಯದ ವಿರುದ್ಧ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರೈತರು ಅಸಮಾಧಾನ ವ್ಯಕ್ತಪಡಿಸಿ ಶುಕ್ರವಾರ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ನಾಯತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರೈತರು ಗ್ರೇಡ್–2 ತಹಶೀಲ್ದಾರ್ ಎಂ.ಎನ್. ಮಠದ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಫಕ್ರಸಾಬ ನದಾಫ ಮಾತನಾಡಿ, “ಸವದತ್ತಿ ತಾಲೂಕಿನಾದ್ಯಂತ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬೆಳೆದಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ₹2,410 ನಿಗದಿ ಮಾಡಿದ್ದರೂ ಮಾರುಕಟ್ಟೆಯಲ್ಲಿ ಕೇವಲ ₹1,700 ಮಾತ್ರ ದೊರೆಯುತ್ತಿದೆ. 5 ಕೆ.ಜಿ ಬೀಜದ ದರವೇ ₹2,500 ಆಗಿರುವ ಪರಿಸ್ಥಿತಿಯಲ್ಲಿ ರೈತರು ನಷ್ಟಕ್ಕೆ ತುತ್ತಾಗುತ್ತಿದ್ದಾರೆ,” ಎಂದು ಆರೋಪಿಸಿದರು.
ಅವರು ಮುಂದುವರಿಸಿ, “ಖರೀದಿ ಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದರೂ ಹೆಸರು ಹಾಗೂ ಜೋಳ ಖರೀದಿ ಇನ್ನೂ ಆರಂಭವಾಗಿಲ್ಲ. ನೋಂದಣಿ ನಡೆದಿದ್ದರೂ ರೈತರಿಗೆ ಯಾವುದೇ ನೆರವು ಸಿಕ್ಕಿಲ್ಲ,” ಎಂದು ಹೇಳಿದರು.
ಚಿಕ್ಕುಂಬಿ ಗ್ರಾಮದ ರೈತ ನಾಯಕ ಈರಪ್ಪ ಪಾಟೀಲ ಮಾತನಾಡಿ, “ಜಿಪಿಎಸ್ ಮಾಡಿಸಿದವರ ಹೆಸರಿನಷ್ಟೇ ಖರೀದಿ ಆಗಿದೆ. ಪ್ರತಿ ಎಕರೆಗೆ 3 ಕ್ವಿಂಟಲ್ ಖರೀದಿಸಬೇಕಾದರೂ ಹೆಚ್ಚಿನ ಜಮೀನು ಹೊಂದಿದ ರೈತರ ಉತ್ಪಾದನೆ ಖರೀದಿಯಾಗಿಲ್ಲ. ಉತ್ತಮ ಕಾಳು ತೋರಿಸಿದರೂ ‘ಡ್ಯಾಮೇಜ್’ ಎಂದು ಹೇಳಿ ಕಡಿಮೆ ದರ ನೀಡಲಾಗುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು “ಗೋವಿನ ಜೋಳ, ಹೆಸರು ಖರೀದಿ ಮಾಡದ ಸರ್ಕಾರಕ್ಕೆ ಧಿಕ್ಕಾರ” ಎಂದು ಘೋಷಣೆ ಕೂಗಿದರು.
ಶ್ರೀಕಾಂತ ಹಟ್ಟಿಹೊಳಿ, ಬಸವರಾಜ ಕಪ್ಪನ್ನವರ, ನಾಗಪ್ಪ ಪ್ರಭುನವರ, ಶಂಕರ ಬೆಡಸೂರ, ಮೌನೇಶ ನಾಯ್ಕರ, ನಿಂಗನಗೌಡ ಸಂಗನಗೌಡ್ರ, ಎಂ.ಎಸ್. ಹಂಜಿಬುಟ್ಟಿ, ಕಲ್ಲನಗೌಡ ಸುಳ್ಳದ, ಕೆ.ಎಂ. ಹೊನ್ನಪ್ಪನವರ ಉಪಸ್ಥಿತರಿದ್ದರು.





