ಪ್ರಸಕ್ತ 2025–26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಾಗಾಣಿಕೆ ಮತ್ತು ಕಟಾವು ವೆಚ್ಚವನ್ನು ಹೊರತುಪಡಿಸಿ ಪ್ರತಿಟನ್ ಕಬ್ಬು ದರ ರೂ.3500/- ನಿಗದಿಪಡಿಸುವಂತೆ ಆಗ್ರಹಿಸಿ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಹಾಗೂ ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಅವರ ನೇತೃತ್ವದಲ್ಲಿ ರೈತರು ನವೆಂಬರ್ 7ರಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಸರ್ಕಾರವು ರೈತರ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಈ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, “ರೈತರ ಪರವಾಗಿ ಪ್ರಸ್ತುತ ಸಾಲಿನ ಕಬ್ಬು ದರ ರೂ.3500/- ನಿಗದಿಪಡಿಸಬೇಕು ಹಾಗೂ ಗೋವಿನ ಜೋಳ ಖರೀದಿ ಕೇಂದ್ರವನ್ನು ಕೂಡಲೇ ಪ್ರಾರಂಭಿಸಬೇಕು” ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ರೈತರು ಕಬ್ಬು ಧಾರಣಿ ನಿಗದಿಗಾಗಿ ಹಗಲಿರುಳು ಹೋರಾಟ ನಡೆಸುತ್ತಿರುವಾಗ, ಹೋರಾಟದ ವೇದಿಕೆಯಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ತಮ್ಮ ಹುಟ್ಟುಹಬ್ಬವನ್ನು ಆಚರಿಸಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. “ರೈತರ ಹೋರಾಟದ ವೇದಿಕೆಯನ್ನು ರಾಜಕೀಯ ವೇದಿಕೆಯಾಗಿಸಬಾರದು. ಮೊದಲು ಬಿಜೆಪಿ ನಾಯಕರ ಒಡೆತನದ ಸಕ್ಕರೆ ಕಾರ್ಖಾನೆಗಳು ಕಬ್ಬು ದರ ಘೋಷಿಸಲಿ” ಎಂದು ರೈತರು ಕಿಡಿಕಾರಿದ್ದಾರೆ.
ಸರ್ಕಾರ ಅಧಿಕಾರ ಹಂಚಿಕೆ ಕಾಳಗದಲ್ಲಿ ತೊಡಗಿಕೊಂಡಿದ್ದು, ರೈತರ ಬದುಕುಮಟ್ಟದ ಪ್ರಶ್ನೆ ಕಡೆಗಣಿಸಿದೆ ಎಂದು ರೈತ ನಾಯಕರು ಆರೋಪಿಸಿದ್ದಾರೆ. “ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ರೈತರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ,” ಎಂದು ಅವರು ಹೇಳಿದರು.
ರೈತರ ಹೋರಾಟಕ್ಕೆ ರೈತಪರ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಕನ್ನಡಪರ ಸಂಘಟನೆಗಳು, ಮಹಿಳಾ ಹಾಗೂ ಯುವ ಸಂಘಟನೆಗಳು ಬೆಂಬಲ ನೀಡುವಂತೆ ಕೋರಲಾಗಿದೆ.





